ಚಿತ್ರದುರ್ಗ: ‘ಕೆಲಸ ಮಾಡುವ ಕ್ಷೇತ್ರದಲ್ಲಿ ವೃತ್ತಿಪರತೆ ಜತೆಗೆ ಸೇವಾ ಮನೋಭಾವ ಅಳವಡಿಸಿಕೊಂಡರೆ ಮಾತ್ರ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ’ ಎಂದು ಉಪ ಪ್ರಾಂಶುಪಾಲ ಎಸ್. ಸುರೇಂದ್ರನಾಥ್ ಹೇಳಿದರು.
ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ಮಾರಗಟ್ಟ, ಗೂಳಯ್ಯನಹಟ್ಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೇತನಕ್ಕಾಗಿ ಕೆಲಸ ಮಾಡುವ ಪ್ರಕ್ರಿಯೆ ಎಂದಿಗೂ ವೃತ್ತಿ ಎನಿಸಿಕೊಳ್ಳುವುದಿಲ್ಲ. ಸಾಮಾಜಿಕ ಕಳಕಳಿ ಹೊಂದಿ ಬದ್ಧತೆ, ಪ್ರಾಮಾಣಿಕತೆಯಿಂದ ದುಡಿದಾಗ ಮಾತ್ರ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿನೇಶ್, ‘ಗುರು-ಶಿಷ್ಯರ ನಡುವಿನ ಸಂಬಂಧ ಅವಿಸ್ಮರಣೀಯವಾದುದು. ವಿದ್ಯೆ ಕಲಿಸಿದ ಗುರುವಿನ ಮಾರ್ಗದರ್ಶನದೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆದರೆ, ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಹಾವೇರಿ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಶ್ರೀನಿವಾಸ್, ಹೊಳಲ್ಕೆರೆ ತಾಲ್ಲೂಕು ದೈಹಿಕ ಶಿಕ್ಷಣ ನಿರ್ದೇಶಕ ರಾಜಪ್ಪ, ಹಿಂದಿ ಭಾಷೆಯ ನೋಡಲ್ ಅಧಿಕಾರಿ ಎಸ್.ಬಿ. ಮಹಾಲಿಂಗಪ್ಪ, ವಿಸ್ತರಣಾಧಿಕಾರಿ ಎನ್.ಆರ್. ಶೇಖರ್, ಶಿಕ್ಷಕರಾದ ಮೇನಕಾ, ವಿಮಲಾ, ನಾಗರಾಜ, ಪ್ರಶಾಂತ, ರಾಜೇಶ್ ಇದ್ದರು.