ಚಿತ್ರದುರ್ಗ: ಮಧ್ಯ ಕರ್ನಾಟಕ ಭಾಗದ ಪ್ರಸಿದ್ಧ ಶರಣ ಸಂಸ್ಕೃತಿ ಉತ್ಸವ ಸೆ. 23ರಿಂದ ಆರಂಭವಾಗುತ್ತಿದೆ. ಇದರ ಅಂಗವಾಗಿ ಮುರುಘಾಮಠದಲ್ಲಿ ಅ. 18ರಂದು ಇದೇ ಪ್ರಥಮ ಬಾರಿ ಸಾವಿರ ಮಠಾಧೀಶರ ಸಮ್ಮುಖದಲ್ಲಿ ‘ಸರ್ವ ಜನಾಂಗದ ಮಠಾಧೀಶರ ಬೃಹತ್ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.
‘ಅಂದು ಮುಂಜಾನೆ ವಿಶ್ವ ಕಲ್ಯಾಣಕ್ಕಾಗಿ ನಡೆಯಲಿರುವ ಸಾಮೂಹಿಕ ಲಿಂಗಪೂಜೆಯಲ್ಲೂ ಸಾವಿರ ಮಠಾಧೀಶರು ಭಾಗವಹಿಸಲಿದ್ದಾರೆ. ಈಗಾಗಲೇ ದಕ್ಷಿಣ ಭಾರತದ ಬಹುತೇಕ ಮಠಾಧೀಶರಿಗೆ ಆಹ್ವಾನ ಪತ್ರಿಕೆ ತಲುಪಿಸುವ ಕಾರ್ಯ ನಡೆಯುತ್ತಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘2020ರ ಗಣಮೇಳದಲ್ಲಿ ಆಯೋಜಿಸಿದ್ದ ಶಿವಯೋಗವು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಪಾತ್ರವಾಗಿದೆ. ಅದೇ ರೀತಿ ಈ ಬಾರಿಯ ಸಾಮೂಹಿಕ ಲಿಂಗ ಪೂಜೆಯೂ ದಾಖಲೆ ಸೃಷ್ಟಿಸಲಿದೆ’ ಎಂದರು.
‘ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಜಮುರಾ ಕಪ್ ವಾಲಿಬಾಲ್ ಟೂರ್ನಿ ಆಯೋಜಿಸಲಾಗಿದೆ. ಶಿವಮೂರ್ತಿ ಶರಣರ ಪೀಠಾರೋಹಣ ತೃತೀಯ ದಶಮಾನೋತ್ಸವದ ಸವಿನೆನಪಿಗಾಗಿ ಈ ಬಾರಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಶ್ರೀಮಠ ತಿಳಿಸಿದೆ.