ಮೊಳಕಾಲ್ಮುರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ‘ಅನುಗ್ರಹ ಯೋಜನೆ’ಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ ಎಂಬ ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಆರೋಪಕ್ಕೆ ತಾಲ್ಲೂಕಿನ ತುಮಕೂರ್ಲಹಳ್ಳಿಯಲ್ಲಿ ಸಿಡಿಲು ಬಡಿದು ಕುರಿಗಳು ಸಾವನ್ನಪ್ಪಿದ್ದ ಘಟನೆಯಲ್ಲಿ ಸಕಾಲಕ್ಕೆ ಪರಿಹಾರ ನೀಡುವಮೂಲಕ ತಕ್ಕ ಉತ್ತರ ನೀಡಲಾಗಿದೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.
ಬುಧವಾರ ತಾಲ್ಲೂಕಿನ ತುಮಕೂರ್ಲಹಳ್ಳಿಯಲ್ಲಿ ಸಿಡಿಲು ಬಡಿದು ಮೃತಪಟ್ಟ 153 ಕುರಿಗಳ ಮಾಲೀಕರಿಗೆ ಸರ್ಕಾರರಿಂದ ನೀಡಲಾದಪರಿಹಾರ ವಿತರಿಸಿ ಅವರು ಮಾತನಾಡಿದರು.
‘ಘಟನೆ ನಡೆದು 48 ಗಂಟೆ ಒಳಗಾಗಿ ₹ 8 ಲಕ್ಷ ಪರಿಹಾರವನ್ನು ಮನೆ ಬಾಗಿಲಿಗೆ ಮುಟ್ಟಿಸುವ ಮೂಲಕ ಸರ್ಕಾರದ ಜನಪರ ಕಾಳಜಿಯನ್ನು ತೋರಿಸಿದ್ದೇವೆ.ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಮತ್ತು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ಈ ವಿಮೆಯನ್ನು ಭರಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸಂತ್ರಸ್ತರಿಗೆ ನೆರವು ಕೊಡಿಸುವುದು ಸಂತಸದ ವಿಚಾರ ತಂದಿದೆ. ಪರಿಹಾರ ಹಣವನ್ನು ಸದುಪಯೋಗ ಮಾಡಿಕೊಂಡು ಮತ್ತೆ ಬದುಕು ಕಟ್ಟಿಕೊಳ್ಳಬೇಕು’ಎಂದರು.
ತಹಶೀಲ್ದಾರ್ ಟಿ. ಸುರೇಶ್ ಕುಮಾರ್, ಪಶು ಇಲಾಖೆ ತಾಲ್ಲೂಕು ನಿರ್ದೇಶಕ ಡಾ. ರಂಗಪ್ಪ, ಬಿಜೆಪಿ ಮಂಡಲಾಧ್ಯಕ್ಷ ಡಾ. ಪಿ.ಎಂ. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಪಿ. ಜಯಪಾಲಯ್ಯ, ಸಿಪಿಐ ಜಿ.ಬಿ. ಉಮೇಶ್ ಇದ್ದರು.