ಭರಮಸಾಗರ: ‘ಚುನಾವಣೆಯಲ್ಲಿ ಘೋಷಿಸಿದಂತೆ ಸರ್ಕಾರವು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ಅವಿಭಕ್ತ ಕುಟುಂಬಗಳು ವಿಭಜನೆಗೊಳ್ಳುವ ಸಾಧ್ಯತೆ ಇದೆ ಎನ್ನುವ ಆತಂಕವೂ ಉಂಟಾಗಿದ್ದು ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಲಿವೆ’ ಎಂದು ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆ ಸದ್ಧರ್ಮ ನ್ಯಾಯಪೀಠದಲ್ಲಿ ತಮ್ಮನ್ನು ಭೇಟಿ ಮಾಡಿ ಆಶಿರ್ವಾದ ಪಡೆದ ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರೊಂದಿಗೆ ಪ್ರಸ್ತುತ ರಾಜಕೀಯ ವಿದ್ಯಾಮಾನ ಕುರಿತು ಅವರು ಮಂಗಳವಾರ ಚರ್ಚಿಸಿದರು.
‘ದೀರ್ಘಕಾಲದ ಯೋಜನೆಗಳನ್ನು ರೂಪಿಸಿ ನಾಡಿನ ವಿದ್ಯಾವಂತ ನಿರೋದ್ಯೋಗಿ ಯುವಕರನ್ನು ಮತ್ತು ಶ್ರಮಜೀವಿಗಳನ್ನು ತೊಡಗಿಸಿ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಸರ್ಕಾರದ ಹೊಣೆಗಾರಿಕೆ. ಕೂತುಂಡರೆ ಕುಡಿಕೆ ಹಣ ಸಾಲದು, ದುಡಿದು ಉಣ್ಣುವ ಸಂಸ್ಕೃತಿಯನ್ನು ಕಲಿಸಬೇಕು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟದರು.
‘ಗ್ರಾಮಾಂತರ ಭಾಗದಲ್ಲಿ ಚುನಾವಣಾ ರಾಜಕಾರಣದಿಂದ ಜನರ ಮಧ್ಯೆ ಉಂಟಾಗಿರುವ ದ್ವೇಷ, ಮತ್ಸರ ತೊಡೆದು ಹಾಕಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಮಾಡುವುದು ನಿಮ್ಮ ಹೊಣೆಗಾರಿಕೆ. ಇದನ್ನು ನಿಭಾಯಿಸಿ’ ಎಂದು ಸ್ವಾಮೀಜಿ ಸಲಹೆ ನೀಡಿದರು.
‘ಸಮಾಜಸೇವೆಯು ನಮ್ಮ ಮೇಲಿರುವ ಋಣದ ಹೊರೆಯನ್ನು ಹಗುರ ಮಾಡುವ ದಾರಿ. ನಾವು ಉಪಕಾರ ಮಾಡುತ್ತೇವೆ ಎಂಬ ಭ್ರಮೆ ಸರಿ ಅಲ್ಲ. ನಿಮ್ಮ ಕ್ಷೇತ್ರದ ರೈತರ ಹಿತ ಕಾಯಬೇಕು. ವಿಶೇಷವಾಗಿ ಏತ ನೀರಾವರಿ ಯೋಜನೆಗಳಿಗೆ ಅಡ್ಡಿಯುಂಟಾಗಬಾರದು. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಿ ಎಂದು ಸೂಚಿಸಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ ಅವರು ಐಕ್ಯಮಂಟಪಕ್ಕೆ ಭೇಟಿ ನೀಡಿ ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ನಮಿಸಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮಂಗಳವಾರ ಭೇಟಿ ಮಾಡಿ ಆಶೀರ್ವಾದ ಪಡೆದರು