ಮೊಳಕಾಲ್ಮುರು: ತಾಲ್ಲೂಕಿನ ಮೇಗಲಹಟ್ಟಿಯಲ್ಲಿ ಗ್ರಾಮದಲ್ಲಿ ಮೇ 4ರಂದು ಸಿಡಿಲು ಬಡಿದು ಮೃತಪಟ್ಟಿದ್ದ ತಾಯಿ, ಮಗನ ಕುಟುಂಬಕ್ಕೆ ಶುಕ್ರವಾರ ಸರ್ಕಾರದ ಪರಿಹಾರವನ್ನು ಸಚಿವ ಬಿ. ಶ್ರೀರಾಮುಲು ವಿತರಿಸಿದರು.
ಘಟನೆಯಲ್ಲಿ ಕುರಿಗಾಹಿ ವೃತ್ತಿ ಮಾಡುತ್ತಿದ್ದ ನಾಯಕ ಜನಾಂಗದ ತಾಯಿ ಹಾಗೂ ಮಗ ಇಬ್ಬರು ಮೃತಪಟ್ಟಿದ್ದು, ಪ್ರಕೃತಿ ವಿಕೋಪ ನಿಧಿಯಿಂದ ತಲಾ ₹5 ಲಕ್ಷದಂತೆ ₹10 ಲಕ್ಷವನ್ನು ಕುಟುಂಬ ಸದಸ್ಯರಿಗೆ ವಿತರಣೆ ಮಾಡಲಾಯಿತು.
ಮಳೆಗಾಲದಲ್ಲಿ ಕುರಿ, ದನಗಾಹಿಗಳು, ಕೂಲಿ ಕಾರ್ಮಿಕರು ಎಚ್ಚರದಿಂದ ಇರಬೇಕು. ಹೊಲದಲ್ಲಿ ಇದ್ದಾಗ ಮಳೆ ಬಂದಲ್ಲಿ ವೈಜ್ಞಾನಿಕವಾಗಿ ಆಸರೆ ಪಡೆಯಬೇಕು. ನಿರ್ಲಕ್ಷ್ಯ ಮಾಡಿದಲ್ಲಿ ಪ್ರಾಣ ಹಾನಿಯಾಗುವ ಸಾಧ್ಯತೆ ಇರುವ ಕಾರಣ ನಿರ್ಲಕ್ಷ್ಯ ಮಾಡಬಾರದು ಎಂದು ಸಚಿವ ಬಿ. ಶ್ರೀರಾಮುಲು ಮನವಿ ಮಾಡಿದರು.
ತಹಶೀಲ್ದಾರ್ ಟಿ. ಸುರೇಶ್ ಕುಮಾರ್, ಬಿಜೆಪಿ ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ಸಿಬ್ಬಂದಿ ಇದ್ದರು.