ಚಿತ್ರದುರ್ಗ: ‘ಬಾಲಕಾರ್ಮಿಕ ಪದ್ಧತಿ ದೇಶದ ಬಹುಮುಖ್ಯ ಸಾಮಾಜಿಕ ಪಿಡುಗಾಗಿದ್ದು, ಅದನ್ನು ಸಂಪೂರ್ಣ ನಿರ್ಮೂಲನೆಗೊಳಿಸಬೇಕು’ ಎಂದು ವಿಜ್ಞಾನ ಕೇಂದ್ರದ ಅಧ್ಯಕ್ಷ ಯಾದವರೆಡ್ಡಿ ಹೇಳಿದರು.
ತರಾಸು ರಂಗಮಂದಿರದಲ್ಲಿ ಶುಕ್ರವಾರ ರಾಜ್ಯ ಜ್ಞಾನ ವಿಜ್ಞಾನ ಸಮಿತಿ, ಕೈಲಾಸ್ ಸತ್ಯಾರ್ಥಿ ಫೌಂಡೇಶನ್ ನವದೆಹಲಿ, ಬೆಳಗಾವಿ ಸ್ಪಂದನ ಫೌಂಡೇಶನ್ನಿಂದ ವಿಶ್ವ ಮಾನವ ಹಕ್ಕುಗಳ ದಿನದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಜಾಗೃತಿ ಕುರಿತ ಕಿರುಚಿತ್ರ ‘ಝಳ್ಕಿ’ ಉಚಿತ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಬಡ ಮಕ್ಕಳನ್ನು ಶೋಷಿಸುವ ಸಮಾಜದ ನಡುವೆ ದೇಶ ಸುಸ್ಥಿರ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಾದ್ದು, ಎಲ್ಲರ ಕರ್ತವ್ಯವಾಗಿದೆ’ ಎಂದು ಸಲಹೆ ನೀಡಿದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಕೆ. ಕಾಮಾನಿ, ‘ಶಿಕ್ಷಣದ ಮೂಲಕ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಪ್ರಯತ್ನಗಳಾಗಬೇಕಿದೆ. ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕಿದೆ’ ಎಂದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಋಷಿ ಸಂಸ್ಕೃತಿ ಶಾಲೆ, ಪಾರ್ಶ್ವನಾಥ ಶಾಲೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಕಿರುಚಿತ್ರ ವೀಕ್ಷಿಸಿದರು.
ರಾಜ್ಯ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ ಎಚ್.ಕೆ.ಎಸ್. ಸ್ವಾಮಿ, ಹಿರಿಯ ಪತ್ರಕರ್ತ ಉಜ್ಜನಪ್ಪ, ಸಮಿತಿ ಕಾರ್ಯದರ್ಶಿ ಮಹಾಂತೇಶ್, ಸಹ ಕಾರ್ಯದರ್ಶಿ ನವೀನ್ ಆಚಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಕುಬೇರ್, ಶಿವಣ್ಣ, ಹುಚ್ಚುರಾಯಪ್ಪ ಶೆಟ್ಟಿ, ಸುಧಾ ನಾಗರಾಜ್ ಅವರೂ ಇದ್ದರು.