ಚಿತ್ರದುರ್ಗ: ರಾಜ್ಯ ಮಟ್ಟದ 16ನೇ ಸುಗಮ ಸಂಗೀತ ಸಮ್ಮೇಳನದ ಅದ್ದೂರಿ ಮೆರವಣಿಗೆ ಇಲ್ಲಿನ ಮುರುಘಾ ಮಠದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.
ಮಠದ ಮಹಾದ್ವಾರದ ಬಳಿ ಕಾದಂಬರಿಕಾರ ಬಿ.ಎಲ್.ವೇಣು ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ ಕಹಳೆ ಮೊಳಗಿದವು. ಸರೋಟ್ ಮಾದರಿಯ ವಾಹನ ಏರಿದ ಸಮ್ಮೇಳನದ ಅಧ್ಯಕ್ಷೆ ಮಾಲತಿ ಶರ್ಮ ಅವರನ್ನು ಅನುಭವ ಮಂಟಪಕ್ಕೆ ಕರೆದೊಯ್ಯಲಾಯಿತು.
ಡೊಳ್ಳು ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿತ್ತು. ಡೊಳ್ಳಿನ ನಿನಾದಕ್ಕೆ ಅನುಗುಣವಾಗಿ ಶಾಲಾ ಮಕ್ಕಳು ಹೆಜ್ಜೆ ಹಾಕಿದರು. ಸಂಗೀತಾಸಕ್ತರು ಹಾಗೂ ಕಲಾವಿದರ ದಂಡು ಮೆರವಣಿಗೆಯಲ್ಲಿ ಮೇಳೈಸಿತ್ತು.
ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ಗಾಯಕಿ ರತ್ನಮಾಲ ಪ್ರಕಾಶ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಸೇರಿ ಅನೇಕರು ಭಾಗವಹಿಸಿದ್ದರು.