ಮೊಳಕಾಲ್ಮುರು: ‘ಕೃಷಿ ಕಾರ್ಯದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಸಾವಿರಾರು ಮಹಿಳೆಯರು ಸಕ್ರಿಯವಾಗಿ ತೊಡಗಿಕೊಂಡು ಕೃಷಿ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ’ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಕೃಷಿಕ ಮಹಿಳೆ ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಂತ್ರಜ್ಞಾನದಲ್ಲಿ ದೇಶವು ಎಷ್ಟೇ ಮುನ್ನಡೆದರೂ ಹಸಿವು ನೀಗಿಸಲು ಆಹಾರ ಬೇಕು. ಇದನ್ನು ಯಾವ ತಂತ್ರಜ್ಞಾನದ ಮೂಲಕ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಕರಿಗೆ ಪ್ರಶಸ್ತಿ ನೀಡಿದರೆ ಸಾಲದು. ಸರ್ಕಾರ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಅರಿತು ಪರಿಹರಿಸಿದಾಗ ಮಾತ್ರ ಪ್ರಶಸ್ತಿಗಳಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.
‘ಕೋವಿಡ್ ಪೀಡಿತಳಾಗಿ ಎರಡು ತಿಂಗಳಿಂದ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸಿದ್ದೇನೆ. ಕೃಷಿ ಕ್ಷೇತ್ರದಲ್ಲಿ ಇನ್ನೂ ಸೇವೆ ಸಲ್ಲಿಸುವ ಭಾಗ್ಯ ಇರುವ ಕಾರಣಕ್ಕಾಗಿಯೇ ಏನೋ ಗುಣಮುಖಳಾಗಿ ಬಂದಿರಬಹುದು. ಪ್ರಶಸ್ತಿ ಬರುವ ನಿರೀಕ್ಷೆ ಇರಲಿಲ್ಲ. ಪ್ರಶಸ್ತಿ ನನ್ನಂತಹ ಸಾವಿರಾರು ಮಹಿಳಾ ಕೃಷಿಕರಿಗೆ ಸಂದ ಗೌರವವಾಗಿದೆ. ತಾಂತ್ರಿಕತೆ ಬಳಸಿಕೊಂಡು ಕೃಷಿ ಮಾಡುವುದು ಇಂದು ಮುಖ್ಯವಾಗಿದೆ’ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಒ.ಮೊರಾರ್ಜಿ, ನಿಕಟಪೂರ್ವ ಅಧ್ಯಕ್ಷ ಕೊಂಡ್ಲಹಳ್ಳಿ ಜಯಪ್ರಕಾಶ, ಪ್ರಧಾನ ಕಾರ್ಯದರ್ಶಿ ಶ್ರೀರಾಮುಲು, ನೀಲರಾಜ್, ಖಜಾಂಚಿ ಶಾಂತವೀರಣ್ಣ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಪ್ರಕಾಶ್ ಇದ್ದರು.
***
ಕೇಸು ಹಾಕಲು ಬಂದಿದ್ದರು
‘ಕೊರೊನಾ ಸಂಕಷ್ಟದಲ್ಲಿ ತೆಂಗಿನ ಮರದ ನೀರಾ ಮಾರಾಟದ ವರದಿ ಮಾಧ್ಯಮಗಳಲ್ಲಿ ಬಂದ ತಕ್ಷಣವೇ ನಮ್ಮ ಮೇಲೆ ಅಬಕಾರಿ ಇಲಾಖೆಯವರು ಕೇಸು ಹಾಕಲು ಬಂದಿದ್ದರು. ‘ನೀರಾ ಇಳಿಸಲು ಅನುಮತಿ ಇದೆ. ಕೇಸು ಹಾಕಿಕೊಳ್ಳಿ. ಈ ಕೆಲಸಕ್ಕೆ ಬರುತ್ತಿರುವ ದಿನಗೂಲಿಗಳ ಹೊಟ್ಟೆಮೇಲೆ ಹೊಡೆಯಲು ನಾವು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದೆವು. ನಮ್ಮನ್ನು ಹೆದರಿಸಿದರು. ನಾವು ನಿರ್ಧಾರ ಬದಲಿಸಲಿಲ್ಲ’ ಎಂದು ಸುಮಂಗಲಮ್ಮ ಹೇಳಿದರು.
‘ಸರ್ಕಾರ ಕಾನೂನುಗಳನ್ನು ಮಾಡುವಾಗ ರೈತರ ಹಿತವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಕೊರೊನಾಕ್ಕೆ ನೀರಾ ಉತ್ತಮ ಪೋಷಕಾಂಶ ಪೇಯವಾಗಿದೆ. ನಿತ್ಯ ಇದನ್ನು ಬಳಸುವ ವೃದ್ಧರೂ ಇದ್ದಾರೆ. ವಿಜ್ಞಾನಿಗಳು ಇದನ್ನು ಸಾಬೀತು ಮಾಡಿದ್ದಾರೆ’ ಎಂದರು.