ಚಿತೆ ಮತ್ತು ಚಿಂತೆಗೆ ಕೇವಲ ಒಂದು ಸೊನ್ನೆಯ ವ್ಯತ್ಯಾಸ ಇದೆ. ಮನುಷ್ಯ ಚಿಂತೆಯ ಸಂತೆಯಲ್ಲಿಯೇ ಬೆಂದು ಹೋಗುತ್ತಿದ್ದಾನೆ. ಆದರೆ ಚಿಂತನೆ ನಮ್ಮ ಮನಸ್ಸಿಗೆ ಬೆಳಕು ನೀಡಿ ಸರಿಯಾದ ದಿಕ್ಕನ್ನು ತೋರಿಸುತ್ತದೆ. ಮನುಷ್ಯ ನೆಮ್ಮದಿಯಿಂದ ಬದುಕಲು ಕೇವಲ ಹಣ ಮುಖ್ಯವಲ್ಲ. ಆದರ್ಶ, ಮೌಲ್ಯಗಳು, ಸತ್ಯ, ನೀತಿ, ಪ್ರಾಮಾಣಿಕತೆ, ದುಡಿಮೆಯಂತಹ ಮೌಲ್ಯಗಳು ಬೇಕು. ಸರಳ ಜೀವನ ಸಂಕಟಗಳಿಂದ ಪಾರು ಮಾಡುತ್ತದೆ. ಸಂಪತ್ತು ಸಂಗ್ರಹ ಒಂದು ಪಾಪದ ಕೆಲಸ. ಹಣವನ್ನು ಸತ್ಯದ ತಳಹದಿಯ ಮೇಲೆ ಸಂಪಾದನೆ ಮಾಡಿದ್ದರೆ ಯಾವ ತೊಳಲಾಟಗಳೂ ಇರುವುದಿಲ್ಲ. ವಾಮಮಾರ್ಗದಿಂದ ಸಂಪತ್ತು ಸಂಗ್ರಹಿಸಿದರೆ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದರು.