ಹೊಸದುರ್ಗ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯನ್ನು ಜಾರಿಗೊಳಿಸಿ ಕೂಡಲೇ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಆದಿಜಾಂಬವ ಸಮಾಜದ ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ಶಂಕರಪ್ಪ ಮಾತನಾಡಿ, ‘ಮೀಸಲಾತಿ ಹೆಚ್ಚಳ ಮಾಡಬೇಕೆಂದು ಹತ್ತಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು’ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಸರ್ಕಾರ ನ್ಯಾಯಬದ್ಧ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್ ಮಾತನಾಡಿದರು.
ಆತ್ಮಹತ್ಯೆಗೆ ಯತ್ನ: ಅಂಬೇಡ್ಕರ್ವೃತ್ತದಲ್ಲಿ ಪ್ರತಿಭಟನಕಾರರೊಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಇತರೆ ಪ್ರತಿಭಟನಕಾರರು ತಡೆದರು. ಪೆಟ್ರೋಲ್ ಕಣ್ಣು ಮತ್ತು ಕಿವಿಗೆ ತಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಯಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಹೊನ್ನೇಕೆರೆಹಳ್ಳಿಜಯಣ್ಣ, ಮುಖಂಡರಾದ ಆದ್ರಿಕಟ್ಟೆ ಕುಮಾರಪ್ಪ, ರೊಪ್ಪ ಹನುಮಂತಪ್ಪ, ಹೊನ್ನೇನಹಳ್ಳಿ ರಂಗಪ್ಪ, ಹುಣವಿನಡು ಜಯಪ್ಪ, ಕೃಷ್ಣಮೂರ್ತಿ, ದಾರಮಾದಪ್ಪ, ವಾಲ್ಮೀಕಿ ರವಿತೇಜ, ಕಂಗುವಳ್ಳಿ ಮಹೇಶ್,ದೊಡ್ಡಘಟ್ಟ ರಾಮಚಂದ್ರಪ್ಪ ಇದ್ದರು.