ಹಿರಿಯೂರು: ನಗರದ ಪ್ರಧಾನ ರಸ್ತೆ ಮತ್ತು ಹುಳಿಯಾರು ರಸ್ತೆಗಳಲ್ಲಿ ವಹಿವಾಟು ನಡೆಸುವ ವರ್ತಕರು ತಮ್ಮ ಅಂಗಡಿಗಳಿಗೆ ವಾಹನಗಳಿಂದ ಸರಕು ಇಳಿಸಲು ಮತ್ತು ಭರ್ತಿ ಮಾಡಲು ನಗರ ಠಾಣೆ ಎಸ್ಐ ನಾಗರಾಜ್ ಸಮಯ ನಿಗದಿ ಮಾಡಿದ್ದಾರೆ.
ಭಾನುವಾರ ನಗರ ಠಾಣೆಯಲ್ಲಿ ನಡೆದ ವರ್ತಕರೊಂದಿಗೆ ನಡೆದ ಸಭೆಯಲ್ಲಿ, ‘ವಾಹನಗಳಿಂದ ಸರಕು ಇಳಿಸಲು ಅಥವಾ ವಾಹನಗಳಿಗೆ ಸರಕು ತುಂಬಲು ಬೆಳಿಗ್ಗೆ 9 ಗಂಟೆಗೂ ಮೊದಲು, ಮಧ್ಯಾಹ್ನ 2ರಿಂದ 3.30ರ ಒಳಗೆ ಹಾಗೂ ರಾತ್ರಿ 9ರ ನಂತರ ಸಮಯ ಗೊತ್ತುಪಡಿಸಿದೆ. ನಿಯಮ ಉಲ್ಲಂಘಿಸಿದಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ನಗರ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನಗಳು ವಿಶೇಷವಾಗಿ ದ್ವಿಚಕ್ರ ವಾಹನಗಳು, ಆಟೊಗಳು, ಟ್ಯಾಕ್ಸಿಗಳ ಓಡಾಟದ ಜತೆಗೆ ಪಾದಚಾರಿಗಳ ಸಂಚಾರವೂ ಅತಿಯಾಗಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗಲೆಂದು ಸಮಯ ನಿಗದಿಪಡಿಸಿದ್ದೇವೆ. ಕೆಲವೇ ದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವೈಟ್ಲೈನ್ ವ್ಯವಸ್ಥೆ ಮಾಡಿ, ಎಲ್ಲ ತರಹದ ವಾಹನಗಳ ನಿಲುಗಡೆಗೆ ಸ್ಥಳಾವಾಕಾಶ ಕಲ್ಪಿಸುತ್ತೇವೆ. ವರ್ತಕರು ನಮ್ಮ ಜತೆ ಸಹಕರಿಸಬೇಕು’ ಎಂದು ನಾಗರಾಜ್ ಮನವಿ ಮಾಡಿದರು.
ವರ್ತಕರ ಸಂಘದ ಅಧ್ಯಕ್ಷ ಬಿ.ಜಯಣ್ಣ, ‘ಪೊಲೀಸ್ ಇಲಾಖೆ ನಿಗದಿಪಡಿಸಿರುವ ಸಮಯದಲ್ಲಿಯೇ ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸಿ ಲೋಡಿಂಗ್ ಮತ್ತು ಅನ್ಲೋಡಿಂಗ್ ವ್ಯವಸ್ಥೆ ಮಾಡಿ ಕೊಳ್ಳುತ್ತೇವೆ. ಈ ಬಗ್ಗೆ ಎಲ್ಲ ವರ್ತಕ ರಿಗೂ ಮಾಹಿತಿ ನೀಡುತ್ತೇವೆ. ಸಂಚಾರ ಅಸ್ತವ್ಯಸ್ತವಾಗಲು ಅವಕಾಶ ಕೊಡು ವುದಿಲ್ಲ’ ಎಂದು ಭರವಸೆ ನೀಡಿದರು.
ಸಭೆಯಲ್ಲಿ ರೂಪಾಲಿ ಸುರೇಶ್, ಶರತ್, ಕೆಕೆಎಸ್ ರಾಮಕೃಷ್ಣಮೂರ್ತಿ, ಸಂದೀಪ್ ಬಾಫ್ನ, ಮಂಜುನಾಥ್, ನಾರಾಯಣ ಬಾಬು, ಗೋವಿಂದ ಸಿಂಗ್ ಪಾಲ್ಗೊಂಡಿದ್ದರು.