ಸಿರಿಗೆರೆ: ಪಟ್ಟಣದ ಹಲವು ರೈತರು ಟೊಮೆಟೊ ಬೆಳೆದಿದ್ದು, ಉತ್ತಮ ಇಳುವರಿ ಬಂದರೂ ದರ ಕುಸಿತದಿಂದ ಕಂಗಾಲಾಗಿದ್ದಾರೆ.
‘ಸಮೀಪದ ಹೊಸರಂಗಾಪುರದ ಹೊಲದಲ್ಲಿ ಕೊಳವೆ ಬಾವಿಯಿಂದ ನೀರು ಕಡಿಮೆ, ಹನಿ ನೀರಾವರಿ ಬಳಸಿ ಟೊಮೊಟೊ ಬೆಳೆದಿದ್ದೇನೆ. ಎರಡು ದಿನಗಳಿಗೊಮ್ಮೆ ನೀರು ಒದಗಿಸಿ ಇಳುವರಿ ಪಡೆದರೂ ಬೆಳೆಗೆ ರೋಗ, ಬೆಳೆಗೆ ತಕ್ಕ ದರ ಸಿಗದೆ ಕಂಗಾಲಾಗಿದ್ದೇನೆ. ಐದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದು, ದಿಕ್ಕು ತೋಚದಂತಾಗಿದೆ’ ಎಂದು ಓಬಳಾಪುರದ ರೈತ ಸಿ.ಬಸವರಾಜಪ್ಪ ಅಳಲು ತೋಡಿಕೊಂಡರು.
ಆರಂಭದಲ್ಲಿ ಇಳುವರಿ ಅಧಿಕವಾಗಿ, ಹಂತ ಹಂತವಾಗಿ ಇಳುವರಿ ಕುಂಠಿತವಾಗಿತ್ತು ಈಗ ಸುಧಾರಿಸಿದೆ. ಬೆಳೆಗೆ ಹಚ್ಚಲು ಬಿದಿರಿಗೆ ₹ 1.40 ಲಕ್ಷ, ತಂತಿ ಮತ್ತು ಉರಿ ಹಾಕಿಸುವುದಕ್ಕೆ ₹ 50 ಸಾವಿರ, ಕೂಲಿಗೆ ₹ 40 ಸಾವಿರ, ಕಳೆ, ಗೊಬ್ಬರಕ್ಕೆ ₹ 50 ಸಾವಿರ ಖರ್ಚಾಗಿದೆ. ಕೆ.ಜಿಗೆ ₹3 ರಿಂದ ₹ 5ರೂ ಸಿಕ್ಕರೆ ಬೆಳೆದ ಲಾಭ ಎಲ್ಲಿ ಸಿಗುತ್ತದೆ. ಇಷ್ಟೊಂದು ಖರ್ಚು ಮಾಡಿ ನಷ್ಟ ಹೊಂದುವಂತಾಗಿದೆ ಎಂದು ಹೇಳಿದರು.
ಮಳೆ ಕೊರತೆಯ ದಿನಗಳಲ್ಲಿ ರೋಗ ಬಾಧೆ ಹೆಚ್ಚಾಗುತ್ತದೆ. ಅದಕ್ಕೆ ಔಷಧ ಖರ್ಚು ಸಹ ಹೆಚ್ಚಾಗುತ್ತದೆ. ಗುತ್ತಿಗೆ ಕೊಟ್ಟರೂ ಹಣ್ಣುಗಳನ್ನು ಹಾಳು ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.