ನಾಯಕನಹಟ್ಟಿ (ಚಿತ್ರದುರ್ಗ): ಚಳ್ಳಕೆರೆ ತಾಲ್ಲೂಕಿನ ರೇಖಲಗೆರೆ ಗ್ರಾಮದ ಬಳಿ ಇಟ್ಟಿಗೆ ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ.
ಮೊಳಕಾಲ್ಮುರು ತಾಲ್ಲೂಕಿನ ಯರೇನಹಳ್ಳಿ ಗ್ರಾಮದ ಬಸವರಾಜು (24) ಹಾಗೂ ಶಶಿಕುಮಾರ್ (23) ಮೃತಪಟ್ಟವರು. ತಿಪ್ಪೇಸ್ವಾಮಿ ಎಂಬ ಯುವಕನ ಸ್ಥಿತಿ ಚಿಂತಾಜನಕವಾಗಿದೆ.
ಚಿತ್ರದುರ್ಗಕ್ಕೆ ಇಟ್ಟಿಗೆ ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ರೇಖಲಗೆರೆ ಗ್ರಾಮದ ಕ್ರಾಸ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿದೆ. ಟ್ರ್ಯಾಕ್ಟರ್ ಮೇಲೆ ಮಲಗಿದ್ದ ನಾಲ್ಕು ಜನರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಬಸವರಾಜು ಆರು ತಿಂಗಳ ಹಿಂದೆ ರಾಯಪುರದಲ್ಲಿ ವಿವಾಹವಾಗಿದ್ದರು. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.