ಪರಶುರಾಂಪುರ: ವಾಣಿ ವಿಲಾಸ ಸಾಗರದ ನೀರು ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಹೋಬಳಿ ವೇದಾವತಿ ನದಿ ಪಾತ್ರವನ್ನು ಸೋಮವಾರ ಪ್ರವೇಶಿಸಿದ್ದು ಕಲಮರಹಳ್ಳಿ ಬ್ಯಾರೇಜ್ ತುಂಬಿ, ಬೊಂಬೆರಹಳ್ಳಿ ಬ್ಯಾರೇಜ್ನಲ್ಲಿ 3 ಅಡಿಯಷ್ಟು ನೀರು ಶೇಖರಣೆಯಾಗಿದೆ. ಬುಧವಾರ ಸಂಜೆ ವೇಳೆಗೆ ಚೌಳೂರು ಬ್ಯಾರೇಜ್ ತಲುಪಲಿದೆ.
ವೇದಾವತಿ ನದಿಯ ನೀರು ಹೋಬಳಿಯ ಕಲಮರಹಳ್ಳಿ ಪ್ರವೇಶಿಸುತ್ತಿದ್ದಂತೆ ರೈತರು, ಯುವಕರು ತಂಡೋಪ ತಂಡವಾಗಿ ಬಂದು ವೀಕ್ಷಿಸಿದರು. ಜೊತೆಗೆ ಬಿಸಿಲಿನ ಝಳ ಹೆಚ್ಚಿರುವ ಕಾರಣ ನೀರಿನಲ್ಲಿ ಈಜಾಡಿ ಸಂತಸಪಟ್ಟರು.
ಕಳೆದ ವರ್ಷದಿಂದ ನೀರು ಹರಿಸುತ್ತಿರುವುದರಿಂದ ನದಿ ಪಾತ್ರದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜೊತೆಗೆ ಕುರಿಗಾಹಿಗಳು ಮೇವು, ನೀರು ಅರಸಿ ವಲಸೆ ಹೋಗುವುದನ್ನು ನಿಲ್ಲಿಸಿದ್ದಾರೆ.