ನಾಯಕನಹಟ್ಟಿ: ರೈತರು ತಮ್ಮ ಜಮೀನುಗಳ ಮಣ್ಣಿನ ಆರೋಗ್ಯ ಪರೀಕ್ಷಿಸಿಕೊಂಡು ಮಣ್ಣಿನ ಸಾರಕ್ಕೆ ತಕ್ಕಂತೆ ಗೊಬ್ಬರ ಬಳಸಿದರೆ ಸಮೃದ್ಧ ಬೆಳೆ ತೆಗೆಯಬಹುದು ಎಂದು ಕೃಷಿ ಅಧಿಕಾರಿ ಎನ್.ಹೇಮಂತ್ನಾಯ್ಕ್ ಹೇಳಿದರು.
ಪಟ್ಟಣದ ಜಮೀನಿನಲ್ಲಿ ಗುರುವಾರ ಮಣ್ಣು ಆರೋಗ್ಯ ಮಿಷನ್ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಸಹಯೋಗದಲ್ಲಿ ನಡೆದ ಲಘು ಪೋಷಕಾಂಶಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿ ಅನುಸರಿಸಿ ಮಣ್ಣಿನ ಆರೋಗ್ಯ ರಕ್ಷಣೆ ಬಗ್ಗೆ ಗಮನ ಹರಿಸುವುದಿಲ್ಲ. ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಿ ಸಮಸ್ಯೆ ಎದುರಿಸುತ್ತಾರೆ. ಮಣ್ಣು ಆರೋಗ್ಯ ಪರೀಕ್ಷೆ ನಡೆಸಿದರೆ ಮಣ್ಣಿನಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ದೊರೆಯಲಿದೆ. ಆಗ ಭೂಮಿಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ನೀಡಿ, ಹೆಚ್ಚು ಇಳುವರಿ ಪಡೆಯಬಹುದು ಎಂದು ಹೇಳಿದರು.
ಕೃಷಿ ಇಲಾಖೆ ರೈತರ ಜಮೀನಿನ ಮಣ್ಣಿನ ಆರೋಗ್ಯ ಪರೀಕ್ಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಆ ಮೂಲಕ ಮಣ್ಣಿನ ಸಾರಕ್ಕೆ ತಕ್ಕಂತೆ ಗೊಬ್ಬರ ಬಳಕೆಗೆ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.
ಕೃಷಿ ತಂತ್ರಜ್ಞರಾದ ಪ್ರದೀಪ್ಕುಮಾರ್, ತೃಪ್ತಿ, ಆತ್ಮ ಯೋಜನೆ ನಿರ್ವಾಹಕಿ ಗಂಗಮ್ಮ, ರೈತ ಅನುವುಗಾರರಾದ ಮಚ್ಚೇಂದ್ರಪ್ಪ, ಪಾಲಯ್ಯ, ಶರಣಪ್ಪ, ಮಹಾಂತೇಶ್, ರೈತ ತಿಪ್ಪೇಸ್ವಾಮಿ, ಬೊಮ್ಮಯ್ಯ, ಲೋಕ್ಯನಾಯ್ಕ್ ಇದ್ದರು.