ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆಡಳಿತದಲ್ಲಿ ಯಾರಿಗೂ ರಕ್ಷಣೆಯಿಲ್ಲ

ಗೌರಿಬಿದನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಶಿವಶಂಕರರೆಡ್ಡಿ ಅವರ ಪರ ರೋಡ್ ಷೋ ನಡೆಸಿ, ಮತ ಯಾಚಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
Last Updated 9 ಮೇ 2018, 9:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಹೆಣ್ಣು ಮಗುವನ್ನು ಓದಿಸಿ, ಹೆಣ್ಣು ಮಗುವನ್ನು ರಕ್ಷಿಸಿ ಎಂಬ ಬಿಜೆಪಿಯವರ ಆಡಳಿತದಲ್ಲಿ ಇವತ್ತು ದೇಶದಲ್ಲಿ ಹೆಣ್ಣು ಮಗುವನ್ನು ಬಿಜೆಪಿ ಶಾಸಕರಿಂದ ರಕ್ಷಿಸಿ ಎಂಬ ಹೊಸ ಘೋಷಣೆಯೊಂದು ಕೇಳಿ ಬರುತ್ತಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದರೆ ಪ್ರಧಾನಿ ಮೋದಿ ಅವರು ಆ ಬಗ್ಗೆ ತುಟಿ ಬಿಚ್ಚಲಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ಗೌರಿಬಿದನೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರ ಪರ ರೋಡ್ ಷೋ ನಡೆಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಪ್ರಧಾನಮಂತ್ರಿ ಅವರು ಇಲ್ಲಿಗೆ ಬಂದು ಒಂದೆಡೆ ಜೈಲೂಟ ಮಾಡಿ ಬಂದ ಯಡಿಯೂರಪ್ಪ, ಇನ್ನೊಂದೆಡೆ ಸಾವಿರಾರು ಕೋಟಿ ಸಂಪತ್ತು ಲೂಟಿ ಮಾಡಿದ ರೆಡ್ಡಿ ಸಹೋದರನ್ನು ಇಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ದೊಡ್ಡ ಭಾಷಣ ಮಾಡುತ್ತಾರೆ. ಇವತ್ತು ಮೋದಿ ಅವರು ರಾಜ್ಯದಲ್ಲಿ ಶೋಲೆ ಚಿತ್ರದಲ್ಲಿರುವ ಖಳನಾಯಕರಂತಹವರನ್ನು ಚುನಾ
ವಣೆಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಬಸವಣ್ಣನವರ ನುಡಿದಂತೆ ನಡೆ ವಚನದಂತೆ ನಾವು ಕೊಟ್ಟ ಆಶ್ವಾಸನೆ ಈಡೇರಿಸಿದ್ದೇವೆ. ಪ್ರಧಾನಿ ಕರ್ನಾಟಕಕ್ಕೆ ಭೇಟಿ ನೀಡುವ ಮುನ್ನ ಬಸವಣ್ಣನವರ ಕುರಿತಾದ ಪುಸ್ತಕಗಳನ್ನು ಓದಿ ನುಡಿದಂತೆ ನಡೆ ಪದದ ಅರ್ಥ ತಿಳಿದುಕೊಳ್ಳಲಿ. ಮೋದಿ ಅವರು ಬಸವಣ್ಣನವರ ಮೂರ್ತಿಗೆ ಹಾರ ಹಾಕಿದರೆ ಸಾಲದು, ಅವರ ವಚನದಂತೆ ನಡೆಯಬೇಕಿದೆ’ ಎಂದರು.

‘ದೇಶದಾದ್ಯಂತ ದಲಿತರು, ಆದಿವಾಸಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡಿದ ಅರ್ಧದಷ್ಟು ಹಣವನ್ನು ಕರ್ನಾಟಕದಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ನೀಡಲಾಗಿದೆ. ರಾಜ್ಯದಲ್ಲಿ ನಾವು ರೈತರ ₹ 8000 ಕೋಟಿ ಸಾಲ ಮನ್ನಾ ಮಾಡಿದೆವು. ಮೋದಿ ಅವರಿಗೆ ನಾನು ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ಪ್ರತ್ಯುತ್ತರವನ್ನೇ ನೀಡಲಿಲ್ಲ’ ಎಂದು ಆರೋಪಿಸಿದರು.

ಸಂಸದ ವೀರಪ್ಪ ಮೊಯಿಲಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೇಶವರೆಡ್ಡಿ ಇದ್ದರು.

ಉರಿ ಬಿಸಿಲು ಲೆಕ್ಕಿಸದೆ ಬಂದ ಜನ

ರಾಹುಲ್ ಗಾಂಧಿ ಅವರ ರೋಡ್ ಷೋ ಪ್ರಯುಕ್ತ ನಗರದಲ್ಲಿ ಮಂಗಳವಾರ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರೋಡ್ ಷೋ ನಡೆಸುವ ಮಾರ್ಗದುದ್ದಕ್ಕೂ ತಡೆಬೇಲಿ ನಿರ್ಮಿಸಿದ್ದರು. ಹೆಲಿಕಾಪ್ಟರ್ ಮೂಲಕ ನೇತಾಜಿ ಕ್ರೀಡಾಂಗಣಕ್ಕೆ ಬಳಿದಿಳಿದ ರಾಹುಲ್ ಗಾಂಧಿ ಅಲ್ಲಿಂದ ಬೈಪಾಸ್ ಮೂಲಕ ನ್ಯಾಷನಲ್ ಕಾಲೇಜು ಬಳಿಯ ಎಚ್.ಎನ್.ವೃತ್ತಕ್ಕೆ ತೆರಳಿ ಅಲ್ಲಿ ಸಜ್ಜುಗೊಂಡು ನಿಂತಿದ್ದ ವಿಶೇಷ ವಾಹನ ಏರಿದರು.

ಬಿ.ಎಚ್.ರಸ್ತೆಯಲ್ಲಿ ಸಾಗಿದ ರೋಡ್ ಷೋ ನಾಗಯ್ಯ ರೆಡ್ಡಿ ವೃತ್ತ, ಅಂಬೇಡ್ಕರ್ ವೃತ್ತದ ಹಾಯ್ದು ಅಂಬೇಡ್ಕರ್ ವೃತ್ತ ತಲುಪಿ ಕೊನೆಗೊಂಡಿತು. ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ರಾಹುಲ್ ಅವರು ಕೈಬಿಸುತ್ತ ಕಾರ್ಯಕರ್ತರನ್ನು ಹುರಿದುಂಬಿಸಿದರು. ತಮ್ಮ ನೆಚ್ಚಿನ ಯುವ ನಾಯಕನನ್ನು ನೋಡಲು ಹಳ್ಳಿಗಳಿಂದ ಆಗಮಿಸಿದ ಸಾವಿರಾರು ಜನರು ಊರಿ ಬಿಸಿಲು ಲೆಕ್ಕಿಸದೆ ರಸ್ತೆ ಪಕ್ಕ ಕಾಯ್ದು ಕುಳಿತಿದ್ದರು. ರೋಡ್ ಷೋ ವೇಳೆ ಅನೇಕ ಕಾರ್ಯಕರ್ತರು ರಾಹುಲ್ ವಾಹನದ ಹಿಂದೆ ಸಾಗುತ್ತ ‘ರಾಹುಲ್, ರಾಹುಲ್’ ಎಂದು ಜೋರಾಗಿ ಘೋಷಣೆ ಮೊಳಗಿಸಿದರು.

**
ಮುಂಬರುವ ಐದು ವರ್ಷಗಳಲ್ಲಿ ಸೂರಿಲ್ಲದ ಪ್ರತಿಯೊಬ್ಬ ಬಡವರಿಗೆ ಮನೆ ನಿರ್ಮಿಸುತ್ತೇವೆ. ಯುವಜನರಿಗೆ ಒಂದು ಕೋಟಿ ಉದ್ಯೋಗಗಳನ್ನು ಒದಗಿಸುತ್ತೇವೆ
- ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT