ಹೊಸನಗರ: ಮಗಳ ಮನೆಗೆ ಬಂದ ವೃದ್ಧ ತಂದೆಯನ್ನು ಕೊರೊನಾ ಭೀತಿಯಿಂದ ಅಲ್ಲಿರಲು ಅವಕಾಶ ನೀಡದೇ ಹಾಗೆಯೇ ವಾಪಸ್ ಕಳುಹಿಸಿದ ಘಟನೆ ತಾಲ್ಲೂಕಿನ ನಗರ ಹೋಬಳಿಯಲ್ಲಿ ನಡೆದಿದೆ.
ಭದ್ರಾವತಿ ಮಾವಿನಕೆರೆ ಕಾಲೊನಿ ನಿವಾಸಿಯಾದ 77 ವಯಸ್ಸಿನ ವೃದ್ಧರು ನಗರ ಹೋಬಳಿಯಲ್ಲಿನ ಮಗಳ ಮನೆಗೆ ಬಂದಿದ್ದರು. ಮೊದಲೇ ಕೊರೊನಾ ಭೀತಿಯಲ್ಲಿದ್ದ ಗ್ರಾಮಸ್ಥರು ಈ ಬಗ್ಗೆ ಆಕ್ಷೇಪ ಎತ್ತಿದರು. ಹೀಗಾಗಿ ಅವರನ್ನು ಹಾಗೆಯೇ ವಾಪಸ್ ಕಳುಹಿಸಲಾಗಿದೆ.
ರಕ್ತದೊತ್ತಡದಿಂದ ಬಳಲುತ್ತಿದ್ದ ಅವರು, ‘ಅದೇನೋ ಕಾಯಿಲೆ ಬಂದಿದೆಯಂತೆ, ಅದಕ್ಕೆ ವಾಪಸ್ ಹೋಗು’ ಎಂದು ಗ್ರಾಮಸ್ಥರು ವಾಪಸ್ ಕಳುಹಿಸಿದ್ದಾರೆ’ ಎನ್ನುತ್ತ, ಕಂಡಕಂಡವರಲ್ಲಿ ‘ಭದ್ರಾವತಿಗೆ ಹೋಗಬೇಕು. ಬಿಪಿ ಮಾತ್ರೆ ಬೇಕು’ ಎಂದು ಗೋಗರೆದಿದ್ದಾರೆ.
ಜಿಲ್ಲಾಧಿಕಾರಿ ಸ್ಪಂದನ
ವಯೋವೃದ್ಧರ ಸಮಸ್ಯೆ ತಿಳಿದ ಗ್ರಾಮ ಕಾರ್ಯಪಡೆ ಸದಸ್ಯ ಕರುಣಾಕರ ಶೆಟ್ಟಿ ಸ್ಥಳಕ್ಕೆ ಬಂದು ವೃದ್ಧನಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಿದರು. ನಂತರ ನಗರ ಆಸ್ಪತ್ರೆಗೆ ದಾಖಲಿಸಲಾಯಿತು. ಸಾರ್ವಜನಿಕರ ಮಾಹಿತಿಯ ಮೇರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೊಸನಗರ ತಹಶೀಲ್ದಾರ್ ವಿ.ಎಸ್.ರಾಜೀವ್ ಅವರಿಗೆ ವೃದ್ಧರನ್ನು ಭದ್ರಾವತಿಗೆ ತಲುಪಿಸುವಂತೆ ಸೂಚನೆ ನೀಡಿದರು. ಕೂಡಲೇ 108 ವಾಹನದ ಮೂಲಕ ಅವರನ್ನು ಭದ್ರಾವತಿಗೆ ಕರೆದುಕೊಂಡು ಹೋಗಲಾಯಿತು. ತುರ್ತಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಕ್ರಮಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು.