ಬಜ್ಪೆ: ಹೈಕೋರ್ಟ್ ಪೀಠದ ಆದೇಶದ ಹಿನ್ನೆಲೆಯಲ್ಲಿ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಕಚೇರಿ ಅಧಿಕಾರಿಗಳ ತಂಡವು ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಣತಿ ದೂರದಲ್ಲಿ ವರ್ಷಗಳಿಂದ ಅಕ್ರಮವಾಗಿ ನಡೆಯುತ್ತಿದ್ದ ಕಪ್ಪು ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ದ್ರೋನ್ ಸಮೀಕ್ಷೆ ನಡೆಸಿ, ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಬಜ್ಪೆಗೆ ಹತ್ತಿರದ ಕಂದಾವರ-ಕೊಳಂಬೆ ಗ್ರಾಮದ ಕೌಡೂರಿನಲ್ಲಿ ಚಂದ್ರಹಾಸ ಟಿ. ಅಮೀನ್ ಎಂಬುವವರು 2005ರಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ಪಡೆದುಕೊಂಡಿದ್ದರು. ಪರವಾನಗಿ ವ್ಯಾಪ್ತಿ ಉಲ್ಲಂಘನೆ ಮಾಡಿ ಇಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಹೋರಾಟ ಸಮಿತಿ ದಾವೆ ಹೂಡಿದೆ.
ಮಾರ್ಚ್ 10ರಂದು ದ್ರೋನ್ ಹಾಗೂ ಬೆಂಗಳೂರಿನ ಬಿಐ ಟೆಕ್ನೋ ಕಂಪನಿ ನೆರವು ಪಡೆದ ಇಲಾಖೆ, ನಿರ್ದಿಷ್ಟ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿ ಏಪ್ರಿಲ್ 8ರಂದು ರಾಜ್ಯ ಕಾರ್ಯದರ್ಶಿ ಮೂಲಕ ಹೈಕೋರ್ಟ್ಗೆ ವರದಿ ಸಲ್ಲಿಸಿದೆ. ಕಲ್ಲು ಗಣಿಗಾರಿಕೆ ಬಗ್ಗೆ ವಸ್ತುಸ್ಥಿತಿ ಅಧ್ಯಯನ ನಡೆಸುವಂತೆ ಹೈಕೋರ್ಟ್ ಮಾರ್ಚ್ನಲ್ಲಿ ಆದೇಶ ಹೊರಡಿಸಿತ್ತು. ತಕ್ಷಣವೇ ಕಾರ್ಯಪೃವೃತ್ತರಾದ ಗಣಿ ಕಚೇರಿ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ.
ಇಲಾಖೆ 15 ವರ್ಷ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿತ್ತು. ಉಪ ಖನಿಜ ಉತ್ಖನನ ಮಾಡಿರುವುದು ಕಚೇರಿ ದಾಖಲೆಯಲ್ಲಿ ಕಂಡು ಬಂದಿದೆ. ಕಾನೂನು ಉಲ್ಲಂಘನೆ ಮಾಡಿ ಹೆಚ್ಚುವರಿ ಜಾಗದಲ್ಲಿ ಅಮೀನ್ ಕಲ್ಲು ಗಣಿಗಾರಿಕೆ ನಡೆಸಿರುವುದು ಕಂಡು ಬಂದಿದೆ. ಕಾನೂನುಬಾಹಿರ ನಡೆಸಲಾದ ಕಲ್ಲು ಗಣಿಗಾರಿಕೆಗೆ ಒಟ್ಟು ₹ 15.74 ಕೋಟಿ ದಂಡ ವಿಧಿಸಿ ಪರವಾನಗಿ ರದ್ದುಗೊಳಿಸುವಂತೆ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಬಾರಿ ಪ್ರಮಾಣದ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ಸ್ಥಳೀಯ ಕಂದಾವರ, ಕೊಳಂಬೆ ಗ್ರಾ ಪಂ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದು, ನಕಲಿ ದಾಖಲೆಗಳನ್ನು ಕೂಡಾ ಸೃಷ್ಟಿ ಮಾಡಲಾಗಿದೆ. ವಿಮಾನ ನಿಲ್ದಾಣದಿಂದ 10 ಕಿ.ಮೀ ಅಂತರದಲ್ಲಿ ಯಾವುದೇ ಗಣಿಗಾರಿಕೆ ನಡೆಸಬಾರದೆಂದು ಕಾನೂನು ಇದೆ. ಆದಾಗ್ಯೂ ಅವಕಾಶ ನೀಡಲಾಗಿದೆ. ವ್ಯಾಪಕ ಕಾನೂನು ಬಾಹಿರ ಕೃತ್ಯ ನಡೆದಿದೆ ಎಂದು ವಕೀಲ ದಿನಕರ ರೈ ತಿಳಿಸಿದ್ದಾರೆ.
ವರದಿ ಸಲ್ಲಿಕೆ ಪ್ರಕಾರ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತ ಹಾಗೂ ₹ 16 ಕೋಟಿ ದಂಡವನ್ನು ವಸೂಲಿಗೆ ನ್ಯಾಯಾಲಯ ಆದೇಶ ನೀಡುವ ಸಾಧ್ಯತೆ ಇದೆ. ಚಂದ್ರಹಾಸ ಅಮೀನ್ ಅವರು ಆ ಜಾಗಕ್ಕೆ ಯಾರು ಬಾರದಂತೆ ತಡೆಯಲು ಕೆಲಸಗಾರರ ಮೂಲಕ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಪಟ್ಟಾ ಜಾಗದ ಖಾತೆ ಬದಲಿಸಿ ಎಂ ಪಿ ಶೆಣೈ, ಹೇಮಂತ, ಮೋಹನ ಶೆಟ್ಟಿ ನಕಲಿ ವೀಲುನಾಮೆ ಮಾಡಿಸಲಾದ ಅಕ್ರಮದ ವಿರುದ್ಧ ಹೂಡಲಾಗಿರುವ ಕ್ರಿಮಿನಲ್ ದಾವೆ ಸಹಿತ ಸ್ಥಳೀಯ ನೊಂದವರಿಗೆ ಪರಿಹಾರ ನೀಡುವ ಕುರಿತಾಗಿ ಈ ಹಿಂದೆ ಕೋರ್ಟಿಗೆ ಸಲ್ಲಿಸಲಾಗಿರುವ ದಾವೆಗಳಿಗೆ ಮತ್ತೆ ಚಾಲನೆ ನೀಡಿ, ನೊಂದವರಿಗೆ ನ್ಯಾಯ ಕೊಡಿಸಲಾಗುವುದು ಎಂದರು.
ಗಣಿ ಮಾಲೀಕನ ಪರ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಲ್. ನಾರಾಯಣ ಸ್ವಾಮಿ ಮತ್ತು ಪಿ.ಎನ್. ದಿನೇಶ್ ಕುಮಾರ್ ಅವರಿದ್ದ ನ್ಯಾಯ ಪೀಠವು ವಿಚಾರಣೆ ಮುಂದೂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.