ಬಂಟ್ವಾಳ: ಜಿಲ್ಲಾ ವಸತಿ ಶಾಲಾ ನೌಕರರ ಸಂಘದ ವತಿಯಿಂದ ಬಿ.ಸಿ.ರೋಡ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇದೇ 27ರಂದು ಬೆಳಿಗ್ಗೆ ಗಂಟೆ 10ರಿಂದ ಮಧ್ಯಾಹ್ನ 1 ಗಂಟೆತನಕ 'ವೃತ್ತಿ ಮಾರ್ಗದರ್ಶನ-ಶೈಕ್ಷಣಿಕ ಸಂವಾದ' ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರು 'ಜೀವನ ಮೌಲ್ಯ' ಬಗ್ಗೆ ಶೈಕ್ಷಣಿಕ ಸಂವಾದ ನೆರವೇರಿಸಲಿದ್ದು, ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಎನ್.ಎಂ.ಬಿರಾದಾರ ಅವರು 'ವೃತ್ತಿ ಮಾರ್ಗದರ್ಶನ' ವಿಷಯಕ್ಕೆ ಸಂಬಂಧಿಸಿದಂತೆ ಸಂವಾದ ನಡೆಸುವರು ಎಂದರು.
ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ.ಜೋಸೆಫ್ ಎನ್.ಎಂ. ಉದ್ಘಾಟಿಸಲಿದ್ದು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್ ಎಸ್.ಬಿ., ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹಮ್ಮದ್ ಸಿಯಾರ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್. ಭಾಗವಹಿಸುವರು ಎಂದು ತಿಳಿಸಿದರು.
ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ಅರವಿಂದ ಚೊಕ್ಕಾಡಿ, ಕಾರ್ಯದರ್ಶಿ ಪ್ರವೀಣ್ ಪೂಜಾರಿ, ಕೋಶಾಧಿಕಾರಿ ಸುಬ್ರಹ್ಮಣ್ಯ ನಾಯಕ್, ಸಂಘಟನಾ ಕಾರ್ಯದರ್ಶಿ ಪಣಪ್ಪಿಲ ಪ್ರವೀಣ್ ಪೂಜಾರಿ, ಉಪ್ಪಿನಂಗಡಿ ವಸತಿ ಶಾಲೆ ಪ್ರಾಂಶುಪಾಲ ಕೃಷ್ಣಕುಮಾರ್ ಕೆ.ಬಿ., ಮಚ್ಚಿನ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಗಣೇಶ್ ನಾಯಕ್, ಸಂಘಟನಾ ಜತೆ ಕಾರ್ಯದರ್ಶಿ ವಾಣಿ ಉಪಸ್ಥಿತರಿದ್ದರು.
ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರ
ಪುತ್ತೂರು: ಪ್ರಕೃತಿಯ ಮಡಿಲಲ್ಲಿ ಸ್ವರ ಸಾಮ್ರಾಜ್ಯ ನಿರ್ಮಾಣ ಮಾಡುವ ಪಕ್ಷಿಗಳ ಉಳಿವಿಗೆ ಎಲ್ಲರೂ ಕೈ ಜೋಡಿಸದೆ ಇದ್ದರೆ ಪಕ್ಷಿಗಳು ಅಳಿವಿನಂಚಿಗೆ ಸಾಗಬಹುದು. ಎಲ್ಲರೂ ಪಕ್ಷಿ ಪ್ರೇಮಿಗಳಾಗಿ ಪಕ್ಷಿಗಳ ಉಳಿವಿಗೆ ಪಣತೊಡೋಣ ಎಂದು ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ಹೇಳಿದರು.
ತಾಲ್ಲೂಕಿನ ನನ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಗುಬ್ಬಚ್ಚಿಗೂಡು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರದ ಸಂಚಾಲಕಿ ರಮ್ಯಾ ನಿತ್ಯಾನಂದ ಶೆಟ್ಟಿ ಬದ್ಯಾರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪಕ್ಷಿಗಳಿಗೆ ನೀರಿಡುವ ಮಣ್ಣಿನ ಪಾತ್ರೆಯನ್ನು ಉಚಿತವಾಗಿ ನೀಡಿ, ಪ್ರಾತ್ಯಕ್ಷಿಕೆ ನಡೆಸಲಾಯಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ನಾಗವೇಣಿ ಕೆ. ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.