ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ಜಯರಾಮ್ ಶೆಟ್ಟಿ, 'ಪ್ರೊ.ಅಮೃತ ಸೋಮೇಶ್ವರ ಅಧ್ಯಕ್ಷತೆಯ ಸಮಿತಿ ಇಬ್ಬರು ಸಾಧಕಿಯರನ್ನು ಆಯ್ಕೆ ಮಾಡಿದೆ. ಪಾರ್ವತಿ ಅವರು ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಕಥೆ, ಕಾದಂಬರಿ, ವ್ಯಕ್ತಿಚಿತ್ರ, ವೈಚಾರಿಕ ಲೇಖನ, ನಾಟಕ, ಪುಸ್ತಕ ವಿಮರ್ಶೆ, ರಂಗ ವಿಮರ್ಶೆ ಸೇರಿದಂತೆ 25 ಕೃತಿಗಳನ್ನು ರಚಿಸಿದ್ದಾರೆ. 41 ಕೃತಿಗಳನ್ನು ಮಲೆಯಾಳ, ತುಳು, ಹಿಂದಿ, ಇಂಗ್ಲಿಷ್ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ, ನಾಲ್ಕು ಕೃತಿಗಳ ಸಂಪಾದಕರಾಗಿದ್ದಾರೆ. 10 ಕೃತಿಗಳ ಪ್ರಕಟಣೆಗೆ ಸಿದ್ಧತೆ ನಡೆಸಿದ್ದಾರೆ. ಶಿವರಾಮ ಕಾರಂತ ಮತ್ತು ತಕಳಿ ಶಿವ ಶಂಕರ ಪಿಳ್ಳೆ ಅವರ ಕಾದಂಬರಿಗಳ ತೌಲನಿಕ ಅಧ್ಯಯನಕ್ಕಾಗಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಹಾಗೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ’ ಎಂದರು.