ಗಾಜಿಯಾಬಾದ್: ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಪತ್ರಕರ್ತನಿಗೆ ಗುಂಡಿಕ್ಕಿ ಕೊಲ್ಲಲು ಯತ್ನಿಸಿರುವ ಘಟನೆ ಇಲ್ಲಿನ ಕವಿ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗುಂಡೇಟಿನಿಂದ ಗಾಯಗೊಂಡಿರುವ ಪತ್ರಕರ್ತ ಅನುಜ್ ಚೌಧರಿ ಅವರು ಹಿಂದಿಯ ದೃಶ್ಯಮಾಧ್ಯಮ ಸಹರಾ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಹೊಟ್ಟೆ ಹಾಗೂ ಬಲಗೈಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಳೆಯ ದ್ವೇಷದ ಕಾರಣ ಅಪರಿಚಿತರು ಈ ಹತ್ಯೆಗೆ ಸಂಚು ರೂಪಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಕೃಷ್ಣ ಹೇಳಿದ್ದಾರೆ.
ಚೌಧರಿ ಅವರು ರಾಜಪುರ ಗ್ರಾಮಕ್ಕೆ ಭೇಟಿ ನೀಡಿ ಮನೆಗೆ ಬಂದಿದ್ದರು. ಆಗ ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಬಂದಿದ್ದ ಇಬ್ಬರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೌಧರಿ ಪತ್ನಿ ನಿಶಾ ಅವರು ಬಿಎಸ್ಪಿ ಪಕ್ಷದಿಂದ ಕೌನ್ಸಿಲರ್ ಆಗಿದ್ದಾರೆ.