ಮಂಗಳೂರು: ಬ್ಯಾಂಕ್ನಿಂದ ಸಾಲ ಪಡೆದು 3 ಟನ್ನಷ್ಟು ಬೂದಗುಂಬಳ ಬೆಳೆದ ರೈತ ಮಹಿಳೆಯೊಬ್ಬರು, ತರಕಾರಿಯ ಮಾರಾಟಕ್ಕೆ ಮೊರೆ ಇಟ್ಟಿದ್ದಾರೆ.
ಮಂಗಳೂರು ತಾಲ್ಲೂಕಿನ ಬಳ್ಕುಂಜೆ ಗ್ರಾಮದ ತೆರೆಸಾ ಡಿಸೋಜ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆ. ಇವರು ತಮ್ಮ ಜಮೀನಿನಲ್ಲಿ ಮೂರು ಟನ್ನಷ್ಟು ಬೂದಗುಂಬಳವನ್ನು ಬೆಳೆದಿದ್ದಾರೆ. ತೆರೆಸಾ ಕುಟುಂಬ ಹಗಲು– ರಾತ್ರಿ ದುಡಿದ ಶ್ರಮದಿಂದ ಈ ಫಸಲು ಬಂದಿದ್ದು, ಬೆಳೆಯನ್ನು ಬೆಳೆಯಲು ಬ್ಯಾಂಕ್ನಿಂದ ಸಾಲವನ್ನೂ ಪಡೆಯಲಾಗಿತ್ತು.
ಒಂದೂವರೆ ತಿಂಗಳಿನಿಂದ ಲಾಕ್ಡೌನ್ ಪರಿಸ್ಥಿತಿ ಇದ್ದು, ಬೂದು ಗುಂಬಳದ ಮಾರಾಟಕ್ಕೆ ತೊಂದರೆಯಾಗಿದೆ. ಈ ಬೆಳೆಯನ್ನು ಖರೀದಿ ಮಾಡಿ ಸಂಕಷ್ಟದಲ್ಲಿರುವ ತಮ್ಮ ಪರಿವಾರವನ್ನು ಪಾರು ಮಾಡುವಂತೆ ರೈತ ಮಹಿಳೆ ಮನವಿ ಮಾಡಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಬೂದಿಗುಂಬಳಕ್ಕೆ ಕೆ.ಜಿ.ಯೊಂದಕ್ಕೆ ₹30 ಇದ್ದು, ಕೆ.ಜಿ.ಗೆ ₹10 ರಂತೆ ಮಾರಾಟ ಮಾಡಲು ಸಿದ್ಧರಿದ್ದು, ನೇರ ಖರೀದಿ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ರೈತ ಮಹಿಳೆ ತೆರೆಸಾ ಮನವಿ ಮಾಡಿದ್ದಾರೆ.
ರೈತ ಸಂಘವೂ ಈ ಮಹಿಳೆಯ ನೆರವಿಗೆ ಧಾವಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಕ್ಷಣ ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು, ಉತ್ತಮ ದರಕ್ಕೆ ಬೂದಿಗುಂಬಳವನ್ನು ಖರೀದಿಸುವಂತೆ ರೈತ ಸಂಘದ ನಾಯಕರು ಒತ್ತಾಯಿಸಿದ್ದಾರೆ.