ಮಂಗಳೂರು: ಹಿಂದುಳಿದ ವರ್ಗಗಳ ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ ಮತ್ತು ಆರ್ಥಿಕ ಶಕ್ತಿ ದೊರೆಯಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜರುಗಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ನೀಡುವ ಅವಕಾಶವನ್ನು ಬಳಸಿಕೊಂಡು ಹಿಂದುಳಿದ ವರ್ಗದವರು ಚುನಾವಣೆಗೆ ಸ್ಪರ್ಧಿಸಿ, ಜನರ ಸೇವೆ ಮಾಡಬೇಕು. ಹಿಂಜರಿಕೆಯಿಲ್ಲದೆ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಬಲಿಷ್ಠಗೊಳ್ಳುತ್ತಿದ್ದು, ಸಂಘಟನಾತ್ಮಕ ಕೆಲಸ ಆಗಬೇಕಾಗಿದೆ ಎಂದರು.
ಪದಾಧಿಕಾರಿಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಅಶೋಕ್ ಮೂರ್ತಿ, ವಿವೇಕಾನಂದ ಡಬ್ಬಿ, ಸುರೇಶ್ ಬಾಬು, ವಿಠಲ ಪೂಜಾರಿ, ಭರತ್ ಕುಮಾರ್ ಸೂಟರ್ಪೇಟೆ, ಆರ್.ಸಿ. ನಾರಾಯಣ್ ರೆಂಜ ಇದ್ದರು.
ಎಲ್ಲ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಭಾಗವಹಿಸಿದ್ದರು. ಅಜಂತ ಪಿಲಾರ್ ಸ್ವಾಗತಿಸಿದರು. ಮೋನಪ್ಪ ದೇವಸ್ಯ ನಿರೂಪಿಸಿದರು. ಮಹೇಶ್ ಜೋಗಿ ವಂದಿಸಿದರು.