ಬಜ್ಪೆ : ಪೊಳಲಿಗೆ ಹತ್ತಿರದ ಬಡಗಬೆಳ್ಳೂರಿನ ಶ್ರೀ ಕಾವೇಶ್ವರ ದೇವಳದಲ್ಲಿ ಡಿ. 18ರಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಿತ `ಹಸಿರು ಪ್ರಕೃತಿ' ಮತ್ತು ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ-ಪಡೀಲ್, ಲಯನ್ಸ್ ಕ್ಲಬ್ ತುಳುನಾಡ್ ಮಂಗಳೂರು ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜರುಗಿತು.
ಅತ್ತಾವರ ಕೆಎಂಸಿ ಮತ್ತು ದಂತ ವೈದ್ಯಕೀಯ ಆಸ್ಪತ್ರೆಯ ವೈದ್ಯರು ಶಿಬಿರ ನಡೆಸಿಕೊಟ್ಟರು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕಣ್ಣು, ದಂತ ಪರೀಕ್ಷೆ, ಸ್ತ್ರೀರೋಗ, ಚರ್ಮರೋಗ ತಪಾಸಣೆ ನಡೆದಿದ್ದು, ನೂರಾರು ಮಂದಿ ಪ್ರಯೋಜನ ಪಡೆದುಕೊಂಡರು.
ಕೆಎಂಸಿಯ ಡಾ. ತೃಷಾ ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು. ಈ ಸರಳ ಸಮಾರಂಭದಲ್ಲಿ ಲಯನ್ಸ್ ಕ್ಲಬ್ಬಿನ ಉಮಾ ಹೆಗ್ಡೆ ಮಾತನಾಡುತ್ತ, ಇದು ನಿಮ್ಮ ಮನೆ ಬಾಗಿಲಲ್ಲಿ ಸಿಗುವ ವೈದ್ಯಕೀಯ ಸೇವೆ ಇದಾಗಿದ್ದು, ಹೆಚ್ಚೆಚ್ಚು ಜನರು ಇದರ ಪ್ರಯೋಜನ ಪಡೆದಾಗ ಶಿಬಿರ ಸಾರ್ಥಕವಾಗುವುದು ಎಂದರು.
ವೇದಿಕೆಯಲ್ಲಿ ಉಮೇಶ್ ಶೆಟ್ಟಿ ಪರಿಮೊಗರು, ವಿದ್ಯಾ ಭಟ್, ವಿಲ್ಸನ್ ದಿವಾಕರ, ರವಿರಾಜ ಶೆಟ್ಟಿ ಇದ್ದರು. ಬಡಗಬೆಳ್ಳೂರು ಶಶಕಿರಣ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.