ಮಂಗಳೂರು: ರಾಜ್ಯ ಚುನಾವಣಾ ಆಯೋಗ ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಿಸಿ, ನೀತಿಸಂಹಿತೆ ಜಾರಿಮಾಡಿದ ಬೆನ್ನಲ್ಲೇ ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕರು ಬ್ಯಾನರ್ಗಳನ್ನು ಹಾಕಲಾರಂಭಿಸಿದ್ದಾರೆ.
‘ಅಲ್ಲಿನ ಮೌಂಟ್ ಕಾರ್ಮೆಲ್ನಿಂದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದವರೆಗಿನ ರಸ್ತೆಯ ದುಸ್ಥಿತಿಯನ್ನು ಬಣ್ಣಿಸಲಾಗಿದೆ.
‘ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಕಾರ್ಯಕರ್ತರೇ, ಅಭ್ಯರ್ಥಿಗಳೇ ಮೊದಲು ರಸ್ತೆ ಸರಿಪಡಿಸಿ ಬನ್ನಿ. ನಿಮಗೆ ಸರ್ಕಾರಿ ಸೌಲಭ್ಯ ದೊರಕಿಸಿಕೊಡಲು ನಮ್ಮ ಅಮೂಲ್ಯವಾದ ಮತ ನೀಡುತ್ತಿಲ್ಲ. ಮತ ಬೇಕಾದರೆ ಅಭಿವೃದ್ಧಿ ತೋರಿಸಿ’ ಎಂದು ಬ್ಯಾನರ್ನಲ್ಲಿ ಆಗ್ರಹಿಸಲಾಗಿದೆ.
‘ಪ್ರಧಾನಿ, ಮುಖ್ಯಮಂತ್ರಿ ಬರುವಾಗ ಯಾವ ಹೆದರಿಕೆ, ಭಯ, ಭಕ್ತಿ, ಶ್ರದ್ಧೆಯಿಂದ ರಸ್ತೆ ಡಾಂಬರೀಕರಣ ಮಾಡುತ್ತೀರೋ ಅದೇ ನಿಷ್ಠೆಯನ್ನು ನಿಮಗೆ ಮತ ನೀಡುವ ಪ್ರಜೆಗಳಿಗೆ ಮೊದಲು ತೋರಿಸಿ. ಇಲ್ಲವಾದರೆ ನಿಮಗೆ ನಮ್ಮ ಮತ ಖಂಡಿತ ಸಿಗುವುದಿಲ್ಲ’ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.