ಬೆಳ್ತಂಗಡಿ: ‘ಕಾರ್ಮಿಕರ ಅವಿರತ ಹೋರಾಟದ ಫಲವಾಗಿ ರಚನೆಯಾದ ಕಲ್ಯಾಣ ಮಂಡಳಿಯು ಇಂದು ಲೂಟಿಕೋರರಿಂದ ನಾಶ ಆಗುತ್ತಿದೆ. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಉಪಯೋಗವಾಗಬೇಕಿದ್ದ ಮಂಡಳಿಯ ನಿಧಿ ಕಮಿಷನ್ ಹೊಡೆಯುವ ದಂಧೆಗೆ ಬಲಿಯಾಗುತ್ತಿದೆ’ ಎಂದು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಭಟ್ ಆಕ್ರೋಶ ವ್ಯಕ್ತಪಡಿಸಿದರು.
ಬೆಳ್ತಂಗಡಿ ಕಾರ್ಮಿಕ ಇಲಾಖೆ ಕಚೇರಿ ಎದುರು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಬೆಳ್ತಂಗಡಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಿಐಟಿಯು ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷ ಎಲ್. ಮಂಜುನಾಥ್ ಮಾತನಾಡಿ, ‘ಇಂದಿನ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ನ್ಯಾಯ ಕೊಡಿಸುವ ಕೆಲಸಕ್ಕಿಂತ ಹೆಚ್ಚು ಜನರಲ್ಲೇ ಅನ್ಯಾಯದ ಕೆಲಸ ಮಾಡುತ್ತಾ ಧರ್ಮ ರಾಜಕೀಯ ನಡೆಸುವುದರಲ್ಲೇ ತಲ್ಲೀನವಾಗಿದೆ’ ಎಂದು ಟೀಕಿಸಿದರು.