ಮಂಗಳೂರು: ಸೌರಮಾನ ಪದ್ಧತಿಯ ವರ್ಷಾಚರಣೆ ಮಾಡುವ ತುಳುನಾಡಿನಲ್ಲಿ ಹೊಸ ವರ್ಷ ಬಂದಿದ್ದು, ಮಂಗಳ
ವಾರ ‘ಬಿಸು ಪರ್ಬ’ದ ಮೂಲಕ ನೂತನ ವರ್ಷವನ್ನು ಮನೆಯಲ್ಲಿಯೇ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಲಾಯಿತು.
ಲಾಕ್ಡೌನ್ನಿಂದಾಗಿ ಹಬ್ಬದ ಆಚರಣೆಗಳು ಮನೆಗೆ ಸೀಮಿತವಾಗಿದ್ದು, ದೇವಸ್ಥಾನಗಳಿಗೂ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹಲವರು ತಮ್ಮ ಸಾಮಾಜಿಕ ಜಾಲತಾಣಗಳಾದ ಟ್ವೀಟರ್, ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಿಯೇ ಬಿಸು ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡಿದ್ದಾರೆ. ಜತೆಗೆ ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸುವಂತೆ ತುಳುನಾಡಿನ ದೈವ, ದೇವರುಗಳಲ್ಲಿ ಪ್ರಾರ್ಥಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ತುಳುವಿನಲ್ಲಿಯೇ ಟ್ವೀಟ್ ಮಾಡುವ ಮೂಲಕ ತುಳುವರಿಗೆ ಶುಭ ಕೋರಿದ್ದಾರೆ. ‘ಬಿಸುತ ದಿನ ಪೊಸತ್ ಮನಸ್, ಪೊಸತ್ ಕನಸ್ ಪೊಸತ್ ತೆನಸ್, ಮಾತಲಾ ಪೊಸತ್ ಪೊಸತ್ ಆವಡ್ ಪೊಸ ವರ್ಷೊಡು ಪರತ್ ಮಹಾಮಾರಿ ದೂರ ಅದ್ ಸುಖ ಸಂತೋಸ ನೆಲೆಸಡ್. ಮಾತೆರೆಗ್ ಬಿಸುತ ಸುಭಾಸುಯೊಲು’ (ಯುಗಾದಿ ದಿನ ಹೊಸ ಮನಸ್ಸು, ಹೊಸ ಕನಸು, ಹೊಸ ಊಟ, ಎಲ್ಲವೂ ಹೊಸತಾಗಿರಲಿ. ಹೊಸ ವರ್ಷದಲ್ಲಿ ಹಳೆ ಮಹಾಮಾರಿ ದೂರವಾಗಿ ಸುಖ ಸಂತೋಷ ನೆಲೆಸಲಿ. ಎಲ್ಲರಿಗೂ ಬಿಸು ಹಬ್ಬದ ಶುಭಾಶಯಗಳು) ಎಂದಿದ್ದಾರೆ.
ಅಶ್ವತ್ಥ ಕುಮಾರ್ ಹಾಗೂ ಚಂದ್ರಹಾಸ್ ಪಂಡಿತ್ ಹೌಸ್ ಟ್ವೀಟ್ ಮಾಡಿ, ‘ದೇಶಕ್ಕೆ ಬಂದ ಮಹಾಮಾರಿ ಕೊರೊನಾ ರೋಗ ನಿರ್ಮೂಲನೆ ಆಗಲಿ ಎಂದು ತುಳುನಾಡಿನ ದೈವ ದೇವರುಗಳಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.
ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಹರೀಶ್ ಪೂಂಜಾ ಕೂಡ ಟ್ವೀಟ್ ಮಾಡಿ, ‘ಹೊಸ ವರ್ಷದ ಈ ದಿನ ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಊರಿಗೆ ಬಂದಿರುವ ಕೊರೊನಾ ಮಹಾಮಾರಿ ವಿರುದ್ಧ ಕೆಲಸ ಮಾಡಿರುವ ಎಲ್ಲರಿಗೂ ದೇವರು ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಮನೆಯಲ್ಲಿ ಕುಳಿತು ಹೊಸ ವರ್ಷವನ್ನು ಆಚರಿಸೋಣ’ ಎಂದು ಮನವಿ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತುಳುವಿನಲ್ಲಿಯೇ ಶುಭಾಶಯ ಕೋರಿದ್ದು, ‘ನಮ್ಮ ಊರಿಗೆ ಬಂದಿರುವ ಕೊರೊನಾ ಮಹಾಮಾರಿಯನ್ನು ಎಲ್ಲರೂ ಸೇರಿ ಸೋಲಿಸೋಣ. ಮನೆಯಲ್ಲೇ ಇರೋಣ, ಜಾಗೃತೆಯಿಂದ ಇರೋಣ’ ಎಂದು ಹೇಳಿದ್ದಾರೆ.
ಇನ್ನು ಊರಿಗೆ ಬರಲಾಗದ ಸಹನಾ ಎ. ಅವರು, ‘ಎಲ್ಲವೂ ಸರಿಯಾಗಿದ್ದರೆ ನಾನು ಇಂದು ಈ ಬಿಸು ಭಕ್ಷ್ಯಗಳನ್ನು ಸೇವಿಸಬಹುದಾಗಿತ್ತು. ಪ್ರಪಂಚದ ವಿಭಿನ್ನ ಜನರ ಕೆಲವು ವಿಭಿನ್ನ ಆಹಾರ ಪದ್ಧತಿಗಳಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
‘ಕೊರೊನಾ ಸಂಕಷ್ಟ ದೂರವಾಗಲಿ’
ನಗರದ ಶರವು ಮಹಾಗಣಪತಿ ದೇವಸ್ಥಾನದಲ್ಲಿ ವಿಷು ಸಂಕ್ರಮಣದ ಅಂಗವಾಗಿ ವಿಷುಕಣಿ ಪೂಜೆಯು ಸೋಮವಾರ ಸರಳವಾಗಿ ನಡೆಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ ವಿಷು ಕಣಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ವಿಷು ಹಬ್ಬದ ಸಂದರ್ಭ ಭಕ್ತರ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಶರವು ರಾಘವೇಂದ್ರ ಶಾಸ್ತ್ರೀ, ‘ಶಾರ್ವರಿ ನಾಮ ಸಂವತ್ಸರ ಆರಂಭವಾಗುತ್ತಿದ್ದು, ಈ ಸಂವತ್ಸರ ಜಗತ್ತಿನ ಸಂಕಷ್ಟವನ್ನು ದೂರ ಮಾಡಿ, ಶ್ರೇಯಸ್ಸನ್ನು ನೀಡಲಿ. ಕೊರೊನಾ ಮಾಹಾಮಾರಿ ಜಗತ್ತಿನಿಂದ ದೂರವಾಗಲಿ. ಎಲ್ಲರಿಗೂ ಸುಖ ಸಮೃದ್ಧಿ ನೀಡಲಿ’ ಎಂದು ಹಾರೈಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.