ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಪುಟ್ಟ ಹಳ್ಳಿಯಲ್ಲಿ ಜನರೇ ಸುಮಾರು 1 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಾಲು ಸಂಕವನ್ನು ಗುರುವಾರದಿಂದ ಜನರ ಬಳಕೆಗೆ ಲಭ್ಯವಾಗಿದೆ.
ಸೇತುವೆ ರಚನೆಯ ಹಿಂದೆ ಪತ್ರಕರ್ತ, ಕೃಷಿಕ ಮಹೇಶ್ ಪುಚ್ಚಪ್ಪಾಡಿ ಅವರ ನೇತೃತ್ವದ ಯುವಕರ ತಂಡವು ಸತತ ಕೆಲಸ ಮಾಡಿತ್ತು. ಜೂನ್ 5 ರಂದು ಅಂದಾಜುಪಟ್ಟಿ ತಯಾರಿಸಿ ಜೂನ್ 24 ರಂದು ಕಾಮಗಾರಿ ಮುಕ್ತಾಯಗೊಂಡಿದೆ. ಈ ಕಾಲು ಸಂಕ ಸುಮಾರು 20 ಮೀಟರ್ ಉದ್ದವಿದ್ದು, ಸುಮಾರು 1.2 ಮೀಟರ್ ಅಗಲಿವಿದೆ. ನಡೆದಾಡುವುದು ಮಾತ್ರವಲ್ಲ ದ್ವಿಚಕ್ರ ವಾಹನಗಳೂ ಓಡಾಡಬಹುದಾಗಿದೆ.
ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಗ್ರಾಮಸ್ಥರಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಜನಪ್ರತಿನಿಧಿಗಳ ಮೂಲಕ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ‘ಜನರಿಂದ ಜನರಿಗಾಗಿ ಜನರೇ ಗ್ರಾಮ ಸೇತು’ ಎಂಬ ಹೆಸರಿನಲ್ಲಿ ಗ್ರಾಮಸ್ಥರೇ ಕಾಲು ಸಂಕ ನಿರ್ಮಿಸಿದ್ದಾರೆ.
ತೂಗುಸೇತುವೆಗಳ ತಜ್ಞ ಸುಳ್ಯದ ಗಿರೀಶ್ ಭಾರದ್ವಾಜ್ ಅವರ ಪುತ್ರ ಪತಂಜಲಿ ಭಾರದ್ವಾಜ್ ಅವರ ನೇತೃತ್ವದಲ್ಲಿ ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗುವಂತೆ ಕಬ್ಬಿಣದ ಕಾಲು ಸಂಕ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಊರ ಜನರು ಶ್ರಮದಾನದ ಮೂಲಕ ನೆರವು ಹಾಗೂ ಧನಸಹಾಯ ಮಾಡಿದ್ದಾರೆ. ಪರವೂರಿನ ದಾನಿಗಳು, ಖಾಸಗಿ ಕಂಪನಿಗಳೂ ನೆರವು ನೀಡಿದೆ. ಸುಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ತಲೆಯೆತ್ತಿದೆ.