ಮಂಗಳೂರು: ಮಕ್ಕಳ ತುರ್ತು ರಕ್ಷಣೆ ಹಾಗೂ ಪೋಷಣೆಗಾಗಿ, ಮಕ್ಕಳು ದೌರ್ಜನ್ಯಕ್ಕೆ ಒಳಗಾದಲ್ಲಿ ಸಾರ್ವಜನಿಕರು 1098ಕ್ಕೆ ಕರೆಮಾಡಿ ಮಾಹಿತಿಯನ್ನು ನೀಡಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.
‘ಮಕ್ಕಳ ಸಹಾಯವಾಣಿ-1098’ ಮಾಸಾಚಾರಣೆ ಅಂಗವಾಗಿ ಜಿಲ್ಲಾಡಳಿತ, ಮಕ್ಕಳ ರಕ್ಷಣಾ ಘಟಕ, ಚೈಲ್ಡ್ಲೈನ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಕ್ಕಳ ಸಹಾಯವಾಣಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಮಕ್ಕಳ ರಕ್ಷಣೆ ಹಾಗೂ ಯಾವುದೇ ಮಗುವಿನ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಮಗುವು ದೌರ್ಜನ್ಯ, ಹಿಂಸೆಗೆ ಒಳಗಾಗದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜರ ಮಾತನಾಡಿದರು. ಮಂಗಳೂರಿನ ರಾಯಲ್ ಎನ್ಫೀಲ್ಡ್ ವತಿಯಿಂದ ಬೈಕ್ ರ್ಯಾಲಿ ಹಾಗೂ ಮಹೀಂದ್ರಾ ಕಂಪನಿಯಿಂದ ಜೀಪ್ ರ್ಯಾಲಿ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶಿನಿ ನಿಲಯದ ವಿದ್ಯಾರ್ಥಿಗಳಿಂದ ಮಕ್ಕಳ ದೌರ್ಜನ್ಯ ತಡೆಗಾಗಿ ಬೀದಿನಾಟಕಗಳನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯಮುನಾ ಸ್ವಾಗತಿಸಿದರು. ಪಡಿ ಸಂಸ್ಥೆಯ ಕಾರ್ಯಕ್ರಮ ಪ್ರಬಂಧಕಿ ಪ್ರಾರ್ಥನಾ ನಿರೂಪಿಸಿದರು. ಕೇಂದ್ರದ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ ವಂದಿಸಿದರು. ನಗರ ಸಂಯೋಜಕಿ ಲವಿಟಾ ಡಿಸೋಜ, ಸಿಬ್ಬಂದಿ ಇದ್ದರು.