ಮಂಗಳೂರು: ರಾಣಿ ಅಬ್ಬಕ್ಕ ವಿಹಾರ ನೌಕೆಯಲ್ಲಿ ಸಮುದ್ರ ಮಧ್ಯದಲ್ಲೇಇದೇ 21ರಂದು ‘ಕಡಲ ಜಾನಪದ ವಿಚಾರಗೋಷ್ಠಿ’ ನಡೆಯಲಿದೆ.
ತುಳು ಪರಿಷತ್ ಆಶ್ರಯದಲ್ಲಿ ನಡೆಯುತ್ತಿರುವ ಈ ವಿಚಾರಗೋಷ್ಠಿಯನ್ನು ಅಂದು ಬೆಳಿಗ್ಗೆ 10 ಗಂಟೆಗೆ ಕರಾವಳಿ ಕಾಲೇಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಉದ್ಘಾಟಿಸುವರು. ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ.ಎಂ.ಖಾನ್ ಅಧ್ಯಕ್ಷತೆ ವಹಿಸುವರು. ಎಸ್.ಡಿ.ಸಿ.ಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ರವೀಂದ್ರ ಹಾಗೂ ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಉದ್ಘಾಟನಾ ಸಮಾರಂಭದ ಬಳಿಕ ನೌಕೆಯು ವಾಪಾಸ್ ಬಂದರಿಗೆ ಬರಲಿದ್ದು, ಮುಂದಿನ ವಿಚಾರಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಭಿಕರನ್ನು ಹತ್ತಿಸಿಕೊಂಡು ಎರಡನೇ ಸುತ್ತಿನ ಯಾನ ಆರಂಭಿಸಲಿದೆ. ಈ ವಿಚಾರಗೋಷ್ಠಿಯಲ್ಲಿ ಹಿರಿಯ ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್ ‘ಪಡವುದಪ್ಪೆನ ಪಾರ್ದನ’ ಬಗ್ಗೆ ಮಾತನಾಡುವರು.
ಎರಡನೇ ಗೋಷ್ಠಿಯಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಜನರಲ್ ಮ್ಯಾನೇಜರ್ ರುಡಾಲ್ಫ್ ನೊರೋನ್ಹಾ ‘ಹಳೆ ಕಾಲದ ಕಡಲ ಬದುಕಿನ ತಂತ್ರಜ್ಞಾನ’ ವಿಚಾರದ ಬಗ್ಗೆ ಮಾತನಾಡುವರು. ಲೇಖಕಿ ಡಾ.ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸುವರು. ಡಾ.ವಾಸುದೇವ ಬೆಳ್ಳೆ ಗೋಷ್ಠಿ ನಿರ್ವಹಿಸುವರು.
‘ಕಡಲ ಬದುಕಿನ ಬಗ್ಗೆ ಕಡಲಿನಲ್ಲೇ ಯಾನ ಮಾಡುತ್ತಾ ನಡೆಯುವ ವಿಚಾರಗೋಷ್ಠಿಗೆ ಮಂಗಳೂರು ವಿಶ್ವವಿದ್ಯಾಲಯದ ತುಳು ಪೀಠ ಹಾಗೂ ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಸಹಭಾಗಿತ್ವ ನೀಡಿವೆ. ಸ್ಥಳಾವಕಾಶ ಸೀಮಿತವಾಗಿರುವ ಕಾರಣ ಗೋಷ್ಠಿಯಲ್ಲಿ ಭಾಗವಹಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.