ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರು, ಭಗತ್ ಸಿಂಗ್ ಪಠ್ಯದ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಆರೋಪ ಮಾಡಿದಂತೆ ಯಾವ ಪಠ್ಯವನ್ನೂ ತೆಗೆದು ಹಾಕಿಲ್ಲ. ನಾರಾಯಣ ಗುರು, ಭಗತ್ ಸಿಂಗ್, ಬಸವಣ್ಣ ಎಲ್ಲರ ಪಠ್ಯವೂ ಪುಸ್ತಕದಲ್ಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಹೊರೆಯಾಗದಿರಲಿ ಎನ್ನುವ ಕಾರಣಕ್ಕೆ ಪಠ್ಯದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಕೋವಿಡ್ ಬಳಿಕ ರಾಜ್ಯದಲ್ಲಿ ಶೈಕ್ಷಣಿಕ ಪ್ರಕ್ರಿಯೆಯೇ ಮುಗಿದಿದೆ ಎಂದು ಕಾಂಗ್ರೆಸ್ನವರು ತಿಳಿದುಕೊಂಡಿದ್ದರು. ಆದರೆ ಎಲ್ಲ ವ್ಯವಸ್ಥೆಗಳು ಸುಗಮವಾಗಿ ನಡೆಯುವಾಗ ಪಠ್ಯದ ವಿಚಾರ ಎತ್ತುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈ ಬಾರಿಯೂ ಎಲ್ಲ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಸಮವಸ್ತ್ರದ ವಿಚಾರವನ್ನು ಆಯಾಯ ಶಾಲಾಭಿವೃದ್ಧಿ ಸಮಿತಿ ನೋಡಿಕೊಳ್ಳಲಿದೆ. ಪ್ರೌಢಶಾಲೆ ತನಕ ಸರ್ಕಾರವೇ ಸಮವಸ್ತ್ರ ಪೂರೈಸಲಿದೆ. ಆದರೆ ಸಮವಸ್ತ್ರ ಪೂರೈಕೆಯಲ್ಲಿ ಕೊಂಚ ತಡವಾಗುವ ಸಾಧ್ಯತೆಯಿದೆ. ಒಂದು ತಿಂಗಳೊಳಗೆ ಸಮವಸ್ತ್ರ ಪೂರೈಸಲಾಗುವುದು ಎಂದರು.
ಇತಿಹಾಸದಲ್ಲಿ ಮೊದಲ ಬಾರಿಗೆ ಶಾಲೆ ಆರಂಭದ ದಿನವೇ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಈ ಬಾರಿ ₹1 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.