ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಿರನ ಬೆಳಕಿನಲ್ಲಿ ಮಲ್ಲಿಗೆ ಕಂಪು

Last Updated 31 ಮಾರ್ಚ್ 2018, 20:09 IST
ಅಕ್ಷರ ಗಾತ್ರ

ಬೆಂಗಳೂರು: ತಿಗಳರಪೇಟೆಯಲ್ಲಿ ಝಗಮಗಿಸುತ್ತಿದ್ದ ಬೆಳಕಿನ ಪ್ರವಾಹದೊಂದಿಗೆ ಹುಣ್ಣಿಮೆ ಚಂದಿರನ ಬೆಳಕು ಮಿಳಿತಗೊಂಡು ಹೊಸದೊಂದು ಬಣ್ಣದ ಚಿತ್ತಾರ ಮೂಡಿಸಿತ್ತು. ಇದೇ ವೇಳೆ ಸೂಸಿಬಂದ ಕರಗದ ಮಲ್ಲಿಗೆ ಕಂಪು ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯಿತು.

ಚೈತ್ರ ಪೂರ್ಣಿಮೆಯ ದಿನವಾದ ಶನಿವಾರ ಮಧ್ಯರಾತ್ರಿ ಬೆಂಗಳೂರು ಕರಗ ಶಕ್ತ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ರಾಜ್ಯ ಹಾಗೂ ಹೊರರಾಜ್ಯಗಳ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು. ಕರಗ ಸಾಗುವ ಪ್ರತಿ ಬೀದಿಯಲ್ಲೂ ಜನಸಾಗರ ತುಂಬಿ ತುಳುಕುತ್ತಿತ್ತು.

ಕೆ.ಆರ್.ಮಾರುಕಟ್ಟೆ ಸಮೀಪದ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ತಡರಾತ್ರಿ ಧಾರ್ಮಿಕ ವಿಧಿ– ವಿಧಾನಗಳೊಂದಿಗೆ ಹೂವಿನ ಕರಗ ಆರಂಭವಾಯಿತು. ಇದೇ ಮೊದಲ ಬಾರಿಗೆ ಕರಗ ಹೊತ್ತಿದ್ದ ಅರ್ಚಕ ಎನ್‌.ಮನು ಅವರು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಸರ್ವಾಲಂಕಾರ ಭೂಷಿತರಾಗಿದ್ದ ಮನು ಅವರು ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ ಹಾಗೂ ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ನೂರಾರು ವೀರಕುಮಾರರು ‘ಗೋವಿಂದಾ ಗೋವಿಂದಾ’ ಎಂದು ನಾಮಸ್ಮರಣೆ ಮಾಡುತ್ತ ಕರಗದೊಂದಿಗೆ ಹೆಜ್ಜೆ ಹಾಕಿದರು.

ಹಲಸೂರುಪೇಟೆ ಆಂಜನೇಯಸ್ವಾಮಿ, ಶ್ರೀರಾಮ ದೇವಸ್ಥಾನ ಹಾಗೂ ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿದ ನಂತರ ಕರಗ ಮುಂದೆ ಸಾಗಿತು. ನಂತರ ನಗರ್ತಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನ, ಸಿದ್ದಣ್ಣಗಲ್ಲಿಯ ಭೈರದೇವರ ದೇವಸ್ಥಾನದ ಮಾರ್ಗವಾಗಿ ಕಬ್ಬನ್‌ಪೇಟೆಯ ಶ್ರೀರಾಮ ಸೇವಾಮಂದಿರ, ಆಂಜನೇಯಸ್ವಾಮಿ ದೇವಸ್ಥಾನ, ಮಕ್ಕಳ ಬಸವಣ್ಣಗುಡಿ, ಗಾಣಿಗರಪೇಟೆಯ ಚನ್ನರಾಯಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನದಿಂದ ಅವೆನ್ಯೂ ರಸ್ತೆಯ ಈಶ್ವರ ದೇವಸ್ಥಾನಕ್ಕೆ ಸಂಚರಿಸಿತು.

ದೊಡ್ಡಪೇಟೆ ಮೂಲಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಕೆ.ಆರ್‌.ಮಾರುಕಟ್ಟೆ ಸಮೀಪದ ಉದ್ಭವ ಗಣಪತಿ ದೇವಸ್ಥಾನಕ್ಕೆ ತೆರಳಿದ ಕರಗದ ಮೆರವಣಿಗೆ, ಬಳಿಕ ಪೊಲೀಸ್‌ ರಸ್ತೆ ಮೂಲಕ ಮುರಹರಿ ಸ್ವಾಮಿ ಮಠ, ಬೀರೇದೇವರ ಗುಡಿ, ಅರಳೇಪೇಟೆ ಮುಖ್ಯರಸ್ತೆ ಮಾರ್ಗವಾಗಿ ಮಸ್ತಾನ್‌ ಸಾಹೇಬರ ದರ್ಗಾಕ್ಕೆ ತಲುಪಿತು. ನಂತರ ಬಳೆಪೇಟೆ, ಬಳೆಗರಡಿ, ಅಣ್ಣಮ್ಮ ದೇವಾಲಯಗಳಿಗೆ ಭೇಟಿ ನೀಡಿತು.

ಆಕರ್ಷಕ ಹೂವಿನ ಕರಗ
ಹನ್ನೊಂದು ದಿನಗಳವರೆಗೆ ನಡೆಯುವ ಕರಗ ಉತ್ಸವದಲ್ಲಿ ಹೂವಿನ ಕರಗ ಉತ್ಸವ ಪ್ರಮುಖವಾದದ್ದು. ಕರಗ ಶಕ್ತ್ಯೋತ್ಸವ ನಡೆಸಿಕೊಡುವ ಮನು ಅವರಿಗೆ ಅರಿಸಿನ ಬಣ್ಣದ ಸೀರೆ ಉಡಿಸಿ, ಬಳೆ ತೊಡಿಸಿ ದ್ರೌಪದಿಯಂತೆ ಸಿಂಗರಿಸಲಾಗಿತ್ತು.

ಮುಖದ ಅಗ್ರಭಾಗದಲ್ಲಿ ವಿಷ್ಣು, ಕೊರಳಲ್ಲಿ ಶಿವ, ಕೆಳ ಭಾಗದಲ್ಲಿ ಬ್ರಹ್ಮ ಮತ್ತು ಮಧ್ಯ ಭಾಗದಲ್ಲಿ ಮಾತೃಗಣಗಳಿವೆ ಎಂಬ ನಂಬಿಕೆ ಇರುವ ‘ಕರಗ’ ಸೂಸುವ ಮಲ್ಲಿಗೆಯ ಪರಿಮಳ ಜನರನ್ನು ಮಂತ್ರ ಮುಗ್ಧರನ್ನಾಗಿಸಿತು. ಮಲ್ಲಿಗೆ ಹೂವಿನ ಅಲಂಕಾರ, ಕನಕಾಂಬರ ಹೂವಿನ ಎಸಳುಗಳು, ಮೇಲ್ತುದಿಯಲ್ಲಿ ಬೆಳ್ಳಿ ಛತ್ರಿ ನೋಡಲು ಆಕರ್ಷಕವಾಗಿತ್ತು.

ಸಹಸ್ರಾರು ಭಕ್ತರು
ಹೂವಿನ ಕರಗ ಶಕ್ತ್ಯೋತ್ಸವವನ್ನು ಸಹಸ್ರಾರು ಭಕ್ತರು ವೀಕ್ಷಿಸಿದರು. ಉತ್ಸವ ಸಾಗಿದ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಕರಗದ ದರ್ಶನ ಪಡೆದು ಧನ್ಯತೆ ಅನುಭವಿಸಿದರು. ಜನರು ವಿವಿಧ ಬಗೆಯ ಹೂಗಳನ್ನು ಕರಗದ ಮೇಲೆ ಎಸೆಯುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.

ಕರಗದ ಪ್ರಯುಕ್ತ ಹಲವೆಡೆ ಅನ್ನ ಛತ್ರಗಳನ್ನು ತೆರೆಯಲಾಗಿತ್ತು. ಕರಗ ನೋಡಲು ಬಂದಿದ್ದವರಿಗೆ ವಿವಿಧ ಬಗೆಯ ತಿನಿಸುಗಳನ್ನು ನೀಡಲಾಯಿತು.

ತಿಗಳರಪೇಟೆ ಸೇರಿದಂತೆ ಕರಗ ಸಾಗುವ ಮಾರ್ಗದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ತಲುಪುವ ಎಲ್ಲ ದೇವಸ್ಥಾನಗಳನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು.

ವ್ಯಾಪಾರ ವಹಿವಾಟು ಜೋರು
ನಗರ್ತಪೇಟೆ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರಿಗಳು ಆಟಿಕೆ, ಫ್ಯಾನ್ಸಿ ವಸ್ತುಗಳು, ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದರು. ಆಟಿಕೆ, ಫ್ಯಾನ್ಸಿ ವಸ್ತುಗಳ ಮಾರಾಟ ಜೋರಾಗಿತ್ತು. ಪೀಪಿಗಳನ್ನು ಖರೀದಿಸಿದ್ದವರು ದಾರಿಯುದ್ದಕ್ಕೂ ಊದುತ್ತಾ ಹೋಗುತ್ತಿದ್ದರು.

ಪೊಲೀಸ್ ಬಂದೋಬಸ್ತ್
ಕರಗ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಧರ್ಮರಾಯಸ್ವಾಮಿ ದೇವಾಲಯದ ರಸ್ತೆ ಬದಿಯಲ್ಲಿ ನಿಂತಿದ್ದ ಪೊಲೀಸರು ಜನರನ್ನು ಮುಂದೆ ಕಳುಹಿಸುತ್ತಿದ್ದರು. ಸಮರೋಪಾದಿಯಲ್ಲಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಪೂಜಾ ಕಾರ್ಯಗಳು
ಕಬ್ಬನ್ ಉದ್ಯಾನದ ಕರಗದ ಕುಂಟೆಯಲ್ಲಿ ಬೆಳಿಗ್ಗೆ 11.30ರ ಸುಮಾರಿಗೆ ಎನ್‌.ಮನು ಅವರು ದೇವಿಗೆ ಗಂಗಾಪೂಜೆ ಸಲ್ಲಿಸಿದರು.

ಧರ್ಮರಾಯಸ್ವಾಮಿ ದೇವಸ್ಥಾನದ ಈಶಾನ್ಯ ಭಾಗದಲ್ಲಿ ಈ ಕುಂಟೆ ಇದೆ. ಇದನ್ನು ಸ್ನಾನಘಟ್ಟ ಎಂದೂ ಕರೆಯುತ್ತಾರೆ. ಇಲ್ಲಿ ಕರಗ ಮಹೋತ್ಸವದ ಮೊದಲ ದಿನ, ಎರಡನೇ ಹಾಗೂ ಕೊನೆಯ ದಿನ ಗಂಗಾಪೂಜೆ ಮಾಡಲಾಗುತ್ತದೆ ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಚಲಕರಿ ನಾರಾಯಣಸ್ವಾಮಿ ತಿಳಿಸಿದರು.

ಗಂಗಾಪೂಜೆ ಬಳಿಕ ಮನು ಅವರು ದೇವಸ್ಥಾನದ ಸುತ್ತಮುತ್ತ ಇರುವ ಸಮುದಾಯದ ಮನೆಗಳಿಗೆ ಹೋಗಿ ಪೂಜೆ ಸ್ವೀಕರಿಸಿದರು. ಅಲ್ಲಿಂದ ತಮ್ಮ ಮನೆಗೆ ತೆರಳಿದರು.

ಸಮುದಾಯದ ಮುಖಂಡರು ಮನು ಅವರ ಮನೆಗೆ ತೆರಳಿ ಹಣ್ಣು ಹಂಪಲು– ಸೀರೆ, ಬಳೆ ನೀಡಿ ಸತ್ಕರಿಸಿದರು. ಬಳಿಕ ಅಲ್ಲಿಂದ ಅವರನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಸಂಜೆ ವೇಳೆಗೆ ಅವರಿಗೆ ವಪನಸಂಸ್ಕಾರ, ಕಂಕಣಧಾರಣೆ ಮಾಡಿದ ಬಳಿಕ ಕೈತುಂಬ ಕರಿಬಳೆ ತೊಡಿಸಲಾಯಿತು.

ದೇವಸ್ಥಾನದಲ್ಲಿ ವೈಷ್ಣವಾಗಮ ರೀತಿಯಲ್ಲಿ ಪೂಜೆ, ಹೋಮಗಳು ನಡೆದವು. ಹೋಮದ ಬೂದಿಯನ್ನು ದೇವರ ಬಳಿ ಇಡಲಾಯಿತು. ಆನಂತರ ಅರ್ಜುನ ಹಾಗೂ ದ್ರೌಪದಿಯರ ಕಲ್ಯಾಣೋತ್ಸವ ನಡೆಯಿತು.

ಪ್ರಧಾನ ಪುರೋಹಿತರು ತಾಳಿಯನ್ನು ಅರ್ಜುನನ ವಿಗ್ರಹಕ್ಕೆ ಮುಟ್ಟಿಸಿ ದ್ರೌಪದಿಯಂತೆ ಸಿಂಗಾರಗೊಂಡಿದ್ದ ಮನು ಅವರಿಗೆ ಕಟ್ಟಿದರು. ಬಳಿಕ ಅನ್ನಕ್ಕೆ ಕುಂಕುಮ ಬೆರೆಸಿ ‘ದೃಷ್ಟಿ ಉಂಡೆ’ ಮಾಡಿ ಕರಗ ಸಾಗುವ ಹಲಸೂರು ಪೇಟೆ, ನಗರ್ತಪೇಟೆ, ಸಿದ್ದಣ್ಣಗಲ್ಲಿ, ಕಬ್ಬನ್‌ಪೇಟೆ, ಅರಳೆಪೇಟೆ, ಗಾಣಿಗರಪೇಟೆ, ಅಕ್ಕಿಪೇಟೆ, ಅರಳೆಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ ಹಾಗೂ ತಿಗಳರಪೇಟೆಯ ಮುಖ್ಯದ್ವಾರಗಳ ಬಳಿ ಇಡಲಾಯಿತು.

ರಾತ್ರಿ 10ರ ಸುಮಾರಿಗೆ ಮನು, ಗಂಟೆ– ಪೂಜಾರಿಗಳು, ವೀರಕುಮಾರರು ಹಾಗೂ ಸಮುದಾಯದ ಕೆಲ ಮುಖಂಡರು ಸಂಪಂಗಿ ಕೆರೆಯಂಗಳದಲ್ಲಿ ಸೇರಿದರು. ಅಲ್ಲಿ ಮನು ಅವರನ್ನು ಅಚ್ಚಮಲ್ಲಿಗೆ, ಜಡೆಕುಚ್ಚು, ಹಾರಗಳಿಂದ ಸಿಂಗರಿಸಿ, ಅರಿಸಿನ ಬಣ್ಣದ ಸೀರೆ ಉಡಿಸಿ, ಕುಪ್ಪಸ ತೊಡಿಸಿ, ವಕ್ಷಸ್ಥಲವನ್ನು ಹವಳದ ಹಾರ, ರತ್ನಾಭರಣಗಳಿಂದ ಅಲಂಕರಿಸಲಾಯಿತು. ಸ್ತ್ರೀರೂಪ ಧರಿಸಿದ ಅವರು ನವವಧುವಿನಂತೆ ಕಂಗೊಳಿಸುತ್ತಿದ್ದರು. ದಿವ್ಯಶಕ್ತಿ ಸ್ವರೂಪರಾದ ಅವರಿಗೆ ಧೂಪ, ದೀಪ, ಆರತಿಗಳ ಅರ್ಚನೆ ಮಾಡಲಾಯಿತು. ವೀರಕುಮಾರರಿಂದ ಅಲಗು ಸೇವೆಯಾದ ಬಳಿಕ ಅವರ ಮೈಮೇಲೆ ಆದಿಶಕ್ತಿಯ ಆವಿರ್ಭಾವವಾಯಿತು. ಬಳಿಕ ಮಂಗಳವಾದ್ಯಗಳೊಂದಿಗೆ ಎಲ್ಲರೂ ದೇವಾಲಯದ ಬಳಿಗೆ ಬಂದರು. ಮನು ಅವರು ಮಾತ್ರ ಗರ್ಭಗುಡಿಯನ್ನು ಪ್ರವೇಶಿಸಿದರು.

ಕುರುಕ್ಷೇತ್ರ ನಾಟಕ ಪ್ರದರ್ಶನ
ಕರಗ ಮಹೋತ್ಸವದ ಪ್ರಯುಕ್ತ ಬಿಬಿಎಂಪಿ ನೌಕರರ ಕಲಾ ಸಂಘದ ವತಿಯಿಂದ ‘ಕುರುಕ್ಷೇತ್ರ’ ಪೌರಾಣಿಕ ನಾಟಕವನ್ನು ಶನಿವಾರ ರಾತ್ರಿ ಪ್ರದರ್ಶಿಸಲಾಯಿತು. ಬಿಬಿಎಂಪಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ನಾಟಕದಲ್ಲಿ 20 ಕಲಾವಿದರು ಅಭಿನಯಿಸಿದರು. ನೂರಾರು ಪ್ರೇಕ್ಷಕರು ನಾಟಕ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT