ಮಂಗಳೂರು: ಮಹಾನಗರ ಪಾಲಿಕೆಯ ಚರಂಡಿ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮನೆಯೊಂದರ ಆವರಣ ಗೋಡೆ ಕುಸಿದು ಕಾರ್ಮಿಕ ಸಾವಿಗೀಡಾದ ಘಟನೆ ಉರ್ವದಲ್ಲಿ ಗುರುವಾರ ಸಂಭವಿಸಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಈರಪ್ಪ ಪ್ರಾಣ ಕಳೆದುಕೊಂಡವರು.
ಉರ್ವದ ಬಿ.ನಾರಾಯಣ ನಾಯಕ್ ಎಂಬುವರ ಮನೆಯ ಸಮೀಪ ಒಂದು ವಾರದಿಂದ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆವರಣ ಗೋಡೆ ಕುಸಿಯುವ ಸಾಧ್ಯತೆಯನ್ನು ಮನೆಯ ಮಾಲೀಕರು ಗುತ್ತಿಗೆದಾರರ ಗಮನಕ್ಕೆ ತಂದಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿ ಮುಂದುವರಿಸಲಾಗಿತ್ತು ಎನ್ನಲಾಗಿದೆ.
ಗುರುವಾರ ಬೆಳಿಗ್ಗೆ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈರಪ್ಪ ಅವರ ಮೇಲೆ ಗೋಡೆ ಬಿದ್ದಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಷ ಆಹಾರ ಸೇವನೆ: ನಾಲ್ವರು ಅಪಾಯದಿಂದ ಪಾರು
ಮಂಗಳೂರು: ವಿಷಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ನಗರದ ಜೆಪ್ಪು ಬಪ್ಪಾಲ್ನ ಗಣೇಶ್ (52), ಅವರ ಪತ್ನಿ ಪ್ರಭಾವತಿ (45), ಮಕ್ಕಳಾದ ಸೌರಭ್ (20) ಮತ್ತು ಪ್ರತೀಕ್ (18) ಮಂಗಳವಾರ ರಾತ್ರಿ ಬೇಯಿಸಿದ ಹೆಸರು ಬೇಳೆ ಹಾಗೂ ಐಸ್ಕ್ರೀಂ ತಿಂದು ಮಲಗಿದ್ದರು. ಬುಧವಾರ ಬೆಳಿಗ್ಗೆ ಮನೆಯ ಬಾಗಿಲು ತೆರೆಯದೇ ಇದ್ದುದನ್ನು ಗಮನಿಸಿದ ಸಂಬಂಧಿಕರಾದ ಕೌಶಿಕ್, ಮಂಜುನಾಥ್ ಹಾಗೂ ರೇಣುಕಾ ಹೋಗಿ ನೋಡಿದಾಗ ನಾಲ್ವರೂ ವಾಂತಿ ಮಾಡಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
ಲಾರಿ ಡಿಕ್ಕಿ: ವ್ಯಕ್ತಿ ಸಾವು
ಮಂಗಳೂರು: ದ್ವಿಚಕ್ರ ವಾಹನ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವಿಗೀಡಾದ ಘಟನೆ ನಗರದ ಕೊಟ್ಟಾರ ಚೌಕಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಆಕಾಶಭವನ ನಿವಾಸಿ ಅಶೋಕ್ (45) ಸಾವಿಗೀಡಾದ ವ್ಯಕ್ತಿ. ದ್ವಿಚಕ್ರ ವಾಹನವನ್ನು ಬದಿಯಲ್ಲಿ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಹರಿಯಾಣ ರಾಜ್ಯದ ನೋಂದಣಿ ಹೊಂದಿರುವ ಲಾರಿ ವೇಗದಲ್ಲಿ ಬಂದುಅಶೋಕ್ ಅವರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತರಾಗಿರುವುದಾಗಿ ವೈದ್ಯರು ತಿಳಿಸಿದ್ದರು ಎಂದು ಉತ್ತರ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಅಪಘಾತ: ಗಾಯಾಳು ಯುವಕ ಸಾವು
ಮಂಗಳೂರು: ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ ಬಿದ್ದು ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಗುರುವಾರ ಸಾವಿಗೀಡಾಗಿದ್ದಾರೆ. ಮೂಡುಶೆಡ್ಡೆಯ ಗೌರವ್ (23) ಪ್ರಾಣ ಕಳೆದುಕೊಂಡವರು. ಇದೇ 25ರಂದು ಮೂಡುಶೆಡ್ಡೆಯಲ್ಲಿ ಗೌರವ್ ವಾಹನ ಸ್ಕಿಡ್ ಆಗಿ ಪಲ್ಟಿಯಾಗಿತ್ತು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಉತ್ತರ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.