ಮೂಡುಬಿದಿರೆ: ಸೋಮವಾರ ನಸುಕಿನ ಭಾರಿ ಗಾಳಿ, ಮಳೆಗೆ ಸ್ವರಾಜ್ಯ ಮೈದಾನದಲ್ಲಿರುವ ಪುರಸಭೆಯ ತಾತ್ಕಾಲಿಕ ಮಾರುಕಟ್ಟೆಯ 13 ಅಂಗಡಿ ಕೋಣೆಗಳ ಮೇಲ್ಚಾವಣಿ ಹಾರಿ ಹೋಗಿ ಲಕ್ಷಾಂತರ ರೂಪಾಯಿ ಮೊತ್ತದ ನಷ್ಟ ಸಂಭವಿಸಿದೆ.
ತಾತ್ಕಾಲಿಕ ಮಾರುಕಟ್ಟೆಯಲ್ಲಿರುವ ಅಂಗಡಿ ಕೋಣೆಗಳನ್ನು ಪುರಸಭೆ ತಗಡು ಶೀಟಿನ ಮೇಲ್ಚಾವಣಿ ನಿರ್ಮಿಸಿಕೊಟ್ಟಿತ್ತು. 13 ಅಂಗಡಿ ಕೋಣೆಗಳ ಮೇಲ್ಚಾವಣಿ ಹಾರಿ ಹೋಗಿದೆ. ಮಳೆ ನೀರು ಕೋಣೆಯೊಳಗೆ ಬಿದ್ದು ಅಲ್ಲಿದ್ದ ದಿನಸಿ ಸಾಮಗ್ರಿ, ತಿಂಡಿತಿನಿಸುಗಳು ಹಾಳಾಗಿವೆ.
ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಪುರಸಭೆ ಅಧಿಕಾರಿಗಳು ಪರಿಶೀಲಿಸಿದರು. ಸಂತ್ರಸ್ತ ವ್ಯಾಪಾರಿಗಳಿಗೆ ತಲಾ ₹5 ಸಾವಿರ ಆರ್ಥಿಕ ನೆರವು ನೀಡುವುದಾಗಿ ಮುಖ್ಯಾಧಿಕಾರಿ ಶೀನ ನಾಯಕ್ ತಿಳಿಸಿದರು. ಪ್ರಾಕೃತಿಕ ವಿಕೋಪ ನಿಧಿಯಿಂದ ಪರಿಹಾರಕ್ಕೆ ಶಾಸಕರು ಭರವಸೆ ನೀಡಿದರು.
ಸಂತ್ರಸ್ತ ವ್ಯಾಪಾರಿಗಳಿಗೆ ಒಣಮೀನು ಸ್ಟಾಲ್ ಬಳಿ ಪರ್ಯಾಯ ವ್ಯವಸ್ಥೆ ಮಾಡಲು ಪುರಸಭೆ ನಿರ್ಧರಿಸಿದೆ.