ಪುತ್ತೂರು: ನಗರದ ಬಪ್ಪಳಿಗೆ ನಿವಾಸಿ, ಯಕ್ಷಗಾನ ಕಲಾವಿದ ಚಂದ್ರಶೇಖರ ಹೆಗ್ಡೆ (59) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಯಕ್ಷಗಾನ ಕೃಷಿಯ ಹಿನ್ನಲೆಯಲ್ಲಿ ಧರ್ಮಸ್ಥಳದಲ್ಲಿ ವಾಸ್ತವ್ಯವಿದ್ದರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಧರ್ಮಸ್ಥಳದ ಮನೆಯಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.
ಯಕ್ಷಗಾನ ಪರಂಪರೆಯ ಕುಟಂಬದವರಾದ ಚಂದ್ರಶೇಖರ್ ಹೆಗ್ಡೆ ಅವರುಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ನಾರಾಯಣ ಹೆಗ್ಡೆ ಅವರ ಪುತ್ರ. ಆರಂಭದಲ್ಲಿ ಸುಂಕದಕಟ್ಟೆ ಮೇಳದಲ್ಲಿ ಕಲಾಸೇವೆಗೈದಿದ್ದರು. 12 ವರ್ಷ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದರು. ಖಳ ನಾಯಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರು ಯಕ್ಷಗಾನ ರಂಗದ ಖಳನಾಗಿ ಗುರುತಿಸಿಕೊಂಡಿದ್ದರು.
ಅನಾರೋಗ್ಯದ ಬಳಿಕ ಮುಮ್ಮೇಳದಿಂದ ಹಿಂದೆ ಸರಿದಿದ್ದ ಅವರು ಯಕ್ಷಗಾನ ಪೋಷಾಕುಗಳ ನಿರ್ಮಾಪಕರಾಗಿ ಕೆಲಸ ಮಾಡುವ ಮೂಲಕ ಬಣ್ಣದ ಲೋಕದ ನಂಟನ್ನು ಉಳಿಸಿಕೊಂಡಿದ್ದರು. ಯಕ್ಷಗಾನ ಪೋಷಾಕುಗಳ ನಿರ್ಮಾಣದಲ್ಲಿ ಅವರು ಅದ್ಭುತ ಪರಿಣತಿ ಹೊಂದಿದ್ದರು.