ಉಜಿರೆ: ಇದೇ 11ರಂದು ನಡೆಯುವ ಶಿವರಾತ್ರಿ ಹಬ್ಬಕ್ಕೆ ಧರ್ಮಸ್ಥಳ ಕ್ಷೇತ್ರ ಸಜ್ಜುಗೊಂಡಿದೆ. ಗುರುವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗಿನ ಜಾವದವರೆಗೆ ನಾಲ್ಕು ಜಾವಗಳಲ್ಲಿ ಮಂಜುನಾಥ ಸ್ವಾಮಿಗೆ ಭಕ್ತರಿಂದ ಅಭಿಷೇಕ ಸೇವೆ ನಡೆಯುತ್ತದೆ.
ವಿಶೇಷ ಪೂಜೆ, ಅರ್ಚನೆಗಳ ಬಳಿಕ ರಥೋತ್ಸವ, ರಾತ್ರಿಯಿಡೀ ಶಿಚಪಂಚಾಕ್ಷರಿ ಪಠಣ, ಶಿವನಾಮ ಸ್ಮರಣೆ, ಭಜನೆ, ಸತ್ಸಂಗ, ಉಪವಾಸ, ಜಾಗರಣೆ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಪುಣ್ಯರಾತ್ರಿಯಾಗಿ ಶಿವರಾತ್ರಿಯನ್ನು ಆಚರಿಸುವುದು ಇಲ್ಲಿನ ಸಂಪ್ರದಾಯ,
ಪಾದಯಾತ್ರಿಗಳ ಗಡಣ: ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಮೊದಲಾದ ಕಡೆಗಳಿಂದ 30 ಸಾವಿರಕ್ಕೂ ಹೆಚ್ಚು ಪಾದಯಾತ್ರಿಗಳು ಬುಧವಾರ ಧರ್ಮಸ್ಥಳ ತಲುಪಿದ್ದಾರೆ. 10 ಸಾವಿರ ಪಾದಯಾತ್ರಿಗಳು ಉಜಿರೆ ತಲುಪಿದ್ದು, ಅಲ್ಲಿನ ಶಾಲಾ-ಕಾಲೇಜುಗಳಲ್ಲಿ ಅವರಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗಿದೆ.
ಗುರುವಾರ ಬೆಳಿಗ್ಗೆ ಹೆಚ್ಚಿನ ಭಕ್ತರು ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಧರ್ಮಸ್ಥಳ ತಲುಪುವರು. ಧರ್ಮಸ್ಥಳದ ವಸತಿಗೃಹದಲ್ಲಿ ಅವರಿಗೆ ವಸತಿ ಕಲ್ಪಿಸಲಾಗುತ್ತದೆ. ಧರ್ಮಸ್ಥಳದ ಸಂಚಾರಿ ಆಸ್ಪತ್ರೆ, ಎಸ್.ಡಿ.ಎಂ ಆಸ್ಪತ್ರೆ ಹಾಗೂ ಆಂಬುಲೆನ್ಸ್ ಉಚಿತ ಆರೋಗ್ಯ ಸೇವೆಯಲ್ಲಿ ನಿರತವಾಗಿವೆ. ಬೆಂಗಳೂರಿನ ಚರ್ಮರೋಗ ತಜ್ಞ ಡಾ. ಕೆ.ಎಲ್. ಪಂಚಾಕ್ಷರಿ ನೇತೃತ್ವದಲ್ಲಿ ಡಾ. ನಾಗರಾಜು, ಡಾ. ಮಂಜುನಾಥ್, ಡಾ. ಶೀತಲ್ ಶರ್ಮ, ಡಾ. ರೇಣುಕಾ, ಡಾ. ನಾಗಲಕ್ಷ್ಮೀ ಮತ್ತು ಕೆ.ಪಿ. ಸಿದ್ದರಾಮೇಗೌಡ ಅವರ ತಂಡ, ಕ್ಷೇತ್ರಕ್ಕೆ ಬರುವ ಭಕ್ತರಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ.