ಉಜಿರೆ: ಅನ್ನದಾನ, ವಿದ್ಯಾದಾನ, ಔಷಧ ದಾನದಲ್ಲಿ ಹೆಸರು ಮಾಡಿರುವ ಧರ್ಮಸ್ಥಳ ಕ್ಷೇತ್ರವು ಕೋವಿಡ್ ಸಂಕಷ್ಟದಲ್ಲೂ ಜನರ ನೆರವಿಗೆ ಬಂದಿದೆ.
ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಧರ್ಮಸ್ಥಳದ ರಜತಾದ್ರಿ ವಸತಿ ಗೃಹದಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರವು ಸೋಂಕಿತರ ಆತಂಕ ನಿವಾರಿಸಿ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದೆ.
300 ಕೊಠಡಿಗಳು, 600 ಹಾಸಿಗೆಗಳಿರುವ ವಸತಿಗೃಹವನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಉಚಿತವಾಗಿ ನೀಡಲಾಗಿದೆ. ನೆರಿಯಾ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಕೋವಿಡ್ ತಗುಲಿದ 120 ಪುರುಷರು ಹಾಗೂ 86 ಮಹಿಳೆಯರು ಸೇರಿದಂತೆ ಒಟ್ಟು 206 ಮಂದಿ ಈ ಕೇಂದ್ರದಲ್ಲಿ ಶುಶ್ರೂಷೆ ಪಡೆದು ಗುಣಮುಖರಾಗಿದ್ದು, ಇದೇ 21ರಂದು ಮರಳಿ ಆಶ್ರಮಕ್ಕೆ ತೆರಳಲಿದ್ದಾರೆ.
206 ಮಂದಿ ಸೋಂಕಿತರಲ್ಲಿ 10 ಮಂದಿ ಅಂಗವಿಕಲರು, 30 ಮಂದಿ 70 ವರ್ಷ ದಾಟಿದ ಹಿರಿಯ ನಾಗರಿಕರು, ಕೆಲವರು ಬುದ್ಧಿಮಾಂದ್ಯರು ಇದ್ದಾರೆ.
ನಗುಮೊಗದ ಸೇವೆ: ಕೇಂದ್ರದಲ್ಲಿರುವ ವೈದ್ಯರು, ದಾದಿಯರು, ನೌಕರರು, ಸ್ವಯಂಸೇವಕರು ನಗುಮೊಗದ ಸೇವೆ ನೀಡುತ್ತಾರೆ. ಆ ಮೂಲಕ ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾರೆ.
ಧರ್ಮಸ್ಥಳದ ವತಿಯಿಂದ ಮೂವರು ದಾದಿಯರು, ಸಿಯೋನ್ ಆಶ್ರಮದ 10 ದಾದಿಯರು ಸೇವೆ ನೀಡಿದ್ದಾರೆ. 8 ಜನ ಶಿಕ್ಷಕರೂ ಸೇವೆಯಲ್ಲಿ ನಿರತರಾಗಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣೆಯ 10 ಮಂದಿ ಸದಸ್ಯರು ದಿನದ 24 ಗಂಟೆಯೂ ಸೇವೆಯಲ್ಲಿದ್ದರು.
ಪ್ರತಿದಿನ ಬೆಳಿಗ್ಗೆ ಉಪಾಹಾರ, 11 ಗಂಟೆಗೆ ಕಷಾಯ ಮತ್ತು ಬಿಸ್ಕತ್, ಮಧ್ಯಾಹ್ನ ಊಟ, ಸಂಜೆ ಕಾಫಿ, ಟೀ, ಕಷಾಯ, ತಿಂಡಿ ಹಾಗೂ ರಾತ್ರಿ ಊಟ ಮತ್ತು ಊಟ ಮಾಡದವರಿಗೆ ಉಪಾಹಾರವನ್ನು ಧರ್ಮಸ್ಥಳದ ವತಿಯಿಂದ ಒದಗಿಸಲಾಗಿದೆ. ಸಿರಿ ಸಂಸ್ಥೆಯ ಮೂಲಕ ಹೆಗ್ಗಡೆ ಅವರು ಎಲ್ಲರಿಗೂ ಉಚಿತ ಬಟ್ಟೆ ನೀಡಿದ್ದಾರೆ.
ಯೋಗಕ್ಷೇಮ ವಿಚಾರಣೆ
ಶಾಸಕ ಹರೀಶ್ ಪೂಂಜ ಆಗಾಗ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯಾಧಿಕಾರಿ ಡಾ. ಕಲಾಮಧು ನೇತೃತ್ವದಲ್ಲಿ ಡಾ. ಆಕಾಶ್, ಡಾ. ಚೆನ್ನಕೇಶವ, ಡಾ. ಸುಮನಾ, ಡಾ. ಸೋನಾ ಮತ್ತು ಹಿರಿಯ ದಾದಿ ಗೀತಾ ಉತ್ತಮ ಸೇವೆ ನೀಡಿದ್ದಾರೆ.