ಉಜಿರೆ: ‘ಕರಾವಳಿ ಜಿಲ್ಲೆಗಳ ಗಂಡು ಕಲೆಯಾದ ಯಕ್ಷಗಾನದಿಂದ ನಮ್ಮ ಪುರಾಣಗಳು, ಧರ್ಮ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಬಗ್ಗೆ ಅಕ್ಷಯ ಜ್ಞಾನ ಪ್ರಾಪ್ತಿಯಾಗುತ್ತದೆ’ ಎಂದು ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಹೇಳಿದರು.
ಭಾನುವಾರ ಧರ್ಮಸ್ಥಳದಲ್ಲಿ ನೂತನ ಯಕ್ಷಗಾನ ಕಲಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಯಕ್ಷಗಾನವನ್ನೂ ಅಭ್ಯಾಸ ಮಾಡಿ ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು. ಯಕ್ಷಗಾನ ಅಕಾಡೆಮಿಯು ತರಬೇತಿ ಪಡೆದವರಿಗೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ವಿದ್ವತ್ ಎಂಬ ಮೂರು ಹಂತದಲ್ಲಿ ಪರೀಕ್ಷೆ ನಡೆಸುತ್ತಿದ್ದು, ವಿದ್ವತ್ ಪರೀಕ್ಷೆ ಉತ್ತೀರ್ಣರಾದವರು ಬಿ.ಎ. ಪದವಿಯ ಮಾನ್ಯತೆ ಪಡೆಯುತ್ತಾರೆ’ ಎಂದರು.
ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯ ಮೋನಪ್ಪ ಗೌಡ,ಉಪಾಧ್ಯಕ್ಷ ಶ್ರೀನಿವಾಸ ರಾವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್, ಕೆ. ಇದ್ದರು.ಮೆಸ್ಕಾಂನ ಎಂಜಿನಿಯರ್ ಸುಹಾಸ್ ಕುಮಾರ್ ಮಾತನಾಡಿದರು. ಸಾಯಿಸುಮ ನಿರೂಪಿಸಿದರು.