ಬೆಳ್ತಂಗಡಿ: ಗ್ರಾಮಗಳಲ್ಲಿ ಸೋಂಕು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ತಾಲ್ಲೂಕಿನ ಎಂಟು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸಂಚಾರಿ ಗಂಟಲು ದ್ರವ ಸಂಗ್ರಹ ವಾಹನಗಳ ಸಂಚಾರ ಪ್ರಾರಂಭಿಸಲಾಗಿದೆ.
‘ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುವುದನ್ನು ತಡೆಯಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ರೋಗ ಲಕ್ಷಣ ಕಂಡುಬಂದವರು, ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಪರೀಕ್ಷೆ ನಡೆಸಲಾಗುತ್ತದೆ' ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
‘ಪ್ರತಿ ವಾಹನದಲ್ಲಿ ಚಾಲಕ, ಡಾಟಾ ನೋಂದಣಿ ಸಿಬ್ಬಂದಿ, ತಂತ್ರಜ್ಞರು ಇರಲಿದ್ದಾರೆ. ಮಧ್ಯಾಹ್ನದ ಒಳಗೆ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗುತ್ತದೆ. ಇದರಿಂದ ವರದಿಯೂ ಶೀಘ್ರ ದೊರೆಯುತ್ತದೆ. ತಾಲ್ಲೂಕು ಆರೋಗ್ಯ ಇಲಾಖೆ ಕೋರಿಕೆ ಮೇರೆಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.