ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಭದ್ರತೆ ಮತ್ತು ಗುಪ್ತಚರ ವಿಭಾಗದ ನಿರ್ದೇಶಕರಾಗಿರುವ 2004ರ ವೃಂದದ ಐಪಿಎಸ್ ಅಧಿಕಾರಿ ಡಾ.ಪಿಎಸ್.ಹರ್ಷ ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.
ನಾಲ್ಕು ತಿಂಗಳಿನಿಂದ ಕಮಿಷನರ್ ಹುದ್ದೆಯಲ್ಲಿದ್ದ ಸಂದೀಪ್ ಪಾಟೀಲ್ ಅವರನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಕಮಿಷನರ್ ಹುದ್ದೆಗೆ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿತ್ತು. ಶನಿವಾರವೇ ಅವರು ಹುದ್ದೆಯ ಪ್ರಭಾರದಿಂದ ಬಿಡುಗಡೆ ಹೊಂದಿದ್ದರು.
ಕಮಿಷನರ್ ಹುದ್ದೆಗೆ 2002ರ ವೃಂದದ ಐಪಿಎಸ್ ಅಧಿಕಾರಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಿಸಲಾಗಿತ್ತು. ಆದರೆ, ಅವರು ಮೂರು ದಿನಗಳಾದರೂ ಅಧಿಕಾರ ಸ್ವೀಕರಿಸಿರಲಿಲ್ಲ. ಸೋಮವಾರ ಸಂಜೆ ಹರ್ಷ ಅವರನ್ನು ಕಮಿಷನರ್ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ವೈದ್ಯಕೀಯ ಪದವೀಧರರಾಗಿರುವ ಹರ್ಷ ಅವರು ಪುತ್ತೂರು ಉಪ ವಿಭಾಗದಲ್ಲಿ ಸಹಾಯಕ ಎಸ್ಪಿಯಾಗಿ ಪೊಲೀಸ್ ಸೇವೆ ಆರಂಭಿಸಿದ್ದರು. ನಂತರ ಹಲವು ಜಿಲ್ಲೆಗಳಲ್ಲಿ ಎಸ್ಪಿಯಾಗಿ, ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ವಾರ್ತಾ ಇಲಾಖೆಯ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.