ನವದೆಹಲಿ: ಸಮುದ್ರ ಮಾರ್ಗದಲ್ಲಿ ಸಂಚರಿಸುವ ಸ್ವಾತಂತ್ರ್ಯವನ್ನು ಏಕಪಕ್ಷೀಯವಾಗಿ ಬದಲಿಸುವ ಹಕ್ಕು ಯಾವುದೇ ರಾಷ್ಟ್ರಗಳಿಗಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ಭಾರತೀಯ ನೌಕಾಪಡೆಯು ರಕ್ಷಣಾ ಚಿಂತಕರ ಚಾವಡಿ ರಾಷ್ಟ್ರೀಯ ಸಾಗರೋತ್ತರ ಪ್ರತಿಷ್ಠಾನ (ಎನ್ಎಂಎಫ್) ಜತೆ ಹಮ್ಮಿಕೊಂಡಿದ್ದ ‘ಇಂಡೊ ಪೆಸಿಫಿಕ್ ಪ್ರಾಂತೀಯ ಸಮ್ಮೇಳನ’ ದಲ್ಲಿ ಅವರು ಮಾತನಾಡಿದರು.
‘ಇಂಡೊ ಪೆಸಿಫಿಕ್ ವಲಯ ಭಾರತಕ್ಕೆ ಪ್ರಮುಖವಾದುದು. ಕಡಲ್ಗಳ್ಳತನ ತಡೆಯುವುದು ಸೇರಿದಂತೆ ಇತರ ಕೃತ್ಯಗಳ ನಿಯಂತ್ರಣಕ್ಕೆ ಭಾರತದ ಪಾತ್ರ ಹೆಚ್ಚಿದೆ’ ಎಂದರು.
ವಿವಾದಿತ ದಕ್ಷಿಣ ಚೀನಾ ಸಮುದ್ರದ ಪ್ರದೇಶಗಳಲ್ಲಿ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಚೀನಾದ ನಡೆಯ ಕುರಿತು ಅವರು ಈ ಹೇಳಿಕೆ ನೀಡಿದ್ದಾರೆ
ಎನ್ನಲಾಗಿದೆ.
ದಕ್ಷಿಣ ಚೀನಾ ಸಮುದ್ರದ ಭೂಭಾಗಗಳನ್ನು ವಶಪಡಿಸಿಕೊಂಡು ಅಲ್ಲಿ ತನ್ನ ಹಕ್ಕು ಸ್ಥಾಪಿಸುವ ಚೀನಾದ ಕ್ರಮ ನೆರೆಯ ರಾಷ್ಟ್ರಗಳ ಜತೆಗಿನ ವಿವಾದಕ್ಕೆ ಕಾರಣವಾಗಿದೆ.
ನೌಕಾಪಡೆ ಮುಖ್ಯಸ್ಥ ಸುನಿಲ್ ಲಾಂಬ, ಶ್ರೀಲಂಕಾ ನೌಕಾಪಡೆಯ ಅಡ್ಮಿರಲ್ ರವೀಂದ್ರ ಸಮಾರಂಭದಲ್ಲಿದ್ದರು.