ಉಜಿರೆ:‘ಬಾಲ್ಯದಲ್ಲಿ ತಾಯಿ-ತಂದೆ ನೀಡಿದ ಸಂಸ್ಕಾರ, ಲಾಲನೆ-ಪಾಲನೆ, ಶಿಸ್ತುಬದ್ಧವಾದ ಜೀವನಕ್ರಮದಿಂದ ಸಾರ್ಥಕ ಬದುಕಿನೊಂದಿಗೆ ಆದರ್ಶಗಳ ಅನುಷ್ಠಾನ ಮಾಡಿ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಹೇಳಿದರು.
ಧರ್ಮಸ್ಥಳದಲ್ಲಿ ಶಾಂತಿವನದ ಪ್ರಶಾಂತ ಪ್ರಾಕೃತಿಕ ಪರಿಸರದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಕಾಲೇಜು ಸಿಬ್ಬಂದಿ ಹಾಗೂ ಅಭಿಮಾನಿಗಳು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಗ್ಗೆ ಅವರು ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸನ್ಮಾನದಿಂದ ಬಹಳ ಸಂತೋಷವಾಗಿದೆ. ಉತ್ಸಾಹ ಮೂಡಿದೆ. ಸುಂದರ ಭವಿಷ್ಯದ ಬಗ್ಗೆ ಕಲ್ಪನೆಯೊಂದಿಗೆ ಕೆಲಸ ಮಾಡಿದರೆ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕೃತಿ ಚಿಕಿತ್ಸೆಗೆ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗುವಂತೆ ಮಾಡಿದ್ದಾರೆ. ಹೆಗ್ಗಡೆಯವರು ಸಿಬ್ಬಂದಿಯನ್ನು ಕೂಡಾ ಕುಟುಂಬದ ಸದಸ್ಯರಂತೆ ಪ್ರೀತಿ-ವಿಶ್ವಾಸದಿಂದ ಕಾಣುತ್ತಾರೆ. ಅವರು ನೀಡಿದ ಅವಕಾಶದಿಂದ ತಾನು ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಹೇಳಿದರು.
ಅನಿತಾ ಸುರೇಂದ್ರಕುಮಾರ್ ಮಾತನಾಡಿ, ‘ದೇವರನ್ನು ನಂಬಿ ಪೂರ್ಣ ಮನಸ್ಸಿನಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ನಮಗೆ ಪೂರ್ಣ ಪ್ರತಿಫಲ ಸಿಗುತ್ತದೆ. ಶಾಂತಿ - ನೆಮ್ಮದಿ ಉಂಟಾಗುತ್ತದೆ’ ಎಂದು ಹೇಳಿದರು.
ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಮಾತನಾಡಿ, ‘ಸುರೇಂದ್ರ ಕುಮಾರ್ ಅವರೊಡನೆ ಕಳೆದ ಬಾಲ್ಯದ ಸವಿನೆನಪುಗಳನ್ನು ಸ್ಮರಿಸಿದರು. ಹೃದಯ ಶ್ರೀಮಂತಿಕೆ ಹೊಂದಿರುವ ಅವರು ಸಂಗೀತ ಪ್ರಿಯರು ಹಾಗೂ ಹಾಸ್ಯಪ್ರಜ್ಞೆ ಉಳ್ಳವರು’ ಎಂದು ಬಣ್ಣಿಸಿದರು.
ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಸ್ವ-ರಚಿತ ಕವನದ ಮೂಲಕ ಅಭಿನಂದನೆ ಸಲ್ಲಿಸಿದರು. ಸುರೇಂದ್ರ ಕುಮಾರ್ ಅವರ ಮನಸ್ಸು ಮಗುವಿನಂತಹ ಮುಗ್ಧ ಮನಸ್ಸು ಹಾಗೂ ನಿಷ್ಕಲ್ಮಶ ನಗುವನ್ನು ಶ್ಲಾಘಿಸಿದರು. ಕನ್ನಡ ಸಾಹಿತ್ಯ ಪರಿಷತ್ನ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಪ್ರದೀಪ್ಕುಮಾರ್ ಕಲ್ಕೂರ ಮತ್ತು ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಎನ್ ಜನಾರ್ದನ್ ಅಭಿನಂದನಾ ಭಾಷಣದೊಂದಿಗೆ ನುಡಿನಮನ ಸಲ್ಲಿಸಿದರು.
ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು. ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಯೋಗ ನಿರ್ದೇಶಕ ಐ.ಶಶಿಕಾಂತ ಜೈನ್ ಧನ್ಯವಾದ ಸಲ್ಲಿಸಿದರು. ಪ್ರೊ. ಬಿ.ಎ ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.