ಘಟನೆ ವಿವರ: ಶುಕ್ರವಾರ ಬೆಳಿಗ್ಗೆ ನಾಡದೋಣಿ ಮೀನುಗಾರಿಕೆಯವರು ಸಮುದ್ರದಲ್ಲಿ ಬಲೆ ಹಾಕಿ ವಾಪಸ್ಸಾಗಿದ್ದರು. ಏಡಿ ಸಿಗುವ ಸಮಯವಾಗಿದ್ದರಿಂದಾಗಿ ಬಲೆ ಹಾಕಲಾಗಿತ್ತು. ಶನಿವಾರ ಬೆಳಿಗ್ಗೆ ಬಹುತೇಕ ದೋಣಿಯವರು ಹಾಕಿರುವ ಬಲೆಯನ್ನು ತೆಗೆಯಲು ಸಮುದ್ರಕ್ಕೆ ತೆರಳಿದ್ದರು. ಆದರೆ, ಭಾರಿ ಗಾಳಿ ಬೀಸುತ್ತಿದ್ದ ಹಿನ್ನೆಲೆಯಲ್ಲಿ ಹಲವು ದೋಣಿಗಳು ತೆರಳದೇ ಉಳಿದಿದ್ದವು. ಆದರೆ, ಹೋದಂತಹ ದೋಣಿಯೊಂದು ಬಲೆ ತೆಗೆದು ವಾಪಸಾಗುವಾಗ ಅಳಿವೆಬಾಗಿಲು ಸಮೀಪ ಕಲ್ಲುಗಳ ಮಧ್ಯೆಯಿಂದ ಒಳಬರುವ ಸಂದರ್ಭ ಭಾರಿ ಗಾಳಿ ಬೀಸಿದ್ದು ಮೀನುಗಾರಿಕಾ ದೋಣಿಯಲ್ಲಿದ್ದ ನವಾಝ್ ಎಂಬವರು ಸಮುದ್ರಕ್ಕೆ ಬಿದ್ದಿದ್ದಾರೆ. ಆದರೆ, ಅಲೆಗಳ ಅಪ್ಪಳಿಸುವಿಕೆಗೆ ದೋಣಿ ನಿಲ್ಲಿಸಲಾಗದೆ ಮೀನುಗಾರರು ಸಮುದ್ರಕ್ಕೆ ಬಿದ್ದವನ ರಕ್ಷಣೆಗೆ ಥರ್ಮಕೋಲ್ ಎಸೆದು ವಾಪಸಾಗಿದ್ದಾರೆ.