ಉಳ್ಳಾಲ (ದಕ್ಷಿಣ ಕನ್ನಡ): ಕಾಸರಗೋಡು ಜಿಲ್ಲೆಯಿಂದ ಮಂಗಳೂರು ಪ್ರವೇಶಕ್ಕೆ ನಕಲಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ತಂದಿದ್ದ ನಾಲ್ವರನ್ನು ಉಳ್ಳಾಲ ಪೊಲೀಸರು ಗುರುವಾರ ತಲಪಾಡಿಯಲ್ಲಿ ಬಂಧಿಸಿದ್ದಾರೆ.
ಕೇರಳದ ಆದಿಲ್, ಹನಿನ್, ಇಸ್ಮಾಯಿಲ್ ಮತ್ತು ಅಬ್ದುಲ್ ತಮೀಮ್ ಬಂಧಿತರು. ನಾಲ್ವರು ಮೊಬೈಲ್ ನಲ್ಲಿ ಎಡಿಟ್ ಮಾಡಿದ್ದ ನಕಲಿ ರಿಪೋರ್ಟ್ ತೋರಿಸಿ ಮಂಗಳೂರು ಪ್ರವೇಶಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ಪರಿಶೀಲನೆ ನಡೆಸಿದಾಗ ನಕಲಿ ಎಂಬುದು ಪತ್ತೆಯಾಗಿದೆ.
ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೇರಳದಿಂದ ಬರುವಾಗ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿದವರಿಗೆ ದಕ್ಷಿಣ ಕನ್ನಡ ಜಿಲ್ಲೆ ಬಂದ ನಂತರ ಕೋವಿಡ್-19 ದೃಢವಾಗುತ್ತಿದೆ. ಹೀಗಾಗಿ ಆರ್ ಟಿಪಿಸಿಆರ್ ನೆಗೆಟಿವ್ ವರದಿಯ ದೃಢತೆಯನ್ನು ಪರೀಕ್ಷಿಸಲು ದಕ್ಷಿಣಕನ್ನಡ ಜಿಲ್ಲಾಡಳಿತ ಮುಂದಾಗಿದೆ.
ನೆಗೆಟಿವ್ ವರದಿಯೊಂದಿಗೆ ಕೇರಳದಿಂದ ಜಿಲ್ಲೆಗೆ ಬರುವ ವಿದ್ಯಾರ್ಥಿಗಳಿಗೆ ಏಳು ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಏಳು ದಿನಗಳ ನಂತರ ಮತ್ತೊಮ್ಮೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ.
ಪ್ರಮುಖವಾಗಿ ನರ್ಸಿಂಗ್, ಎಂಜನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆಯಾಗುತ್ತಿದೆ. ಕಾಲೇಜುಗಳು ಆರಂಭವಾದ ಬಳಿಕ ಇದುವರೆಗೆ ಜಿಲ್ಲೆಯಲ್ಲಿ 630 ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆಯಾಗಿದೆ.