ಮಂಗಳೂರು: ಉದ್ಯೋಗ, ಶಿಕ್ಷಣ ಮತ್ತಿತರ ಕಾರಣಗಳಿಗಾಗಿ ಕೇರಳದ ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವವರಿಗೆ ಜಿಲ್ಲಾಡಳಿತದಿಂದ ನೀಡಿರುವ ಇ–ಪಾಸ್ಗಳ ಅವಧಿಯನ್ನು ಸೆಪ್ಟೆಂಬರ್ 8ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಅಂತರರಾಜ್ಯ ಪ್ರಯಾಣದ ಮೇಲೆ ವಿಧಿಸಿರುವ ನಿರ್ಬಂಧವನ್ನು ಕೇರಳ ರಾಜ್ಯ ಸರ್ಕಾರ ಇನ್ನೂ ಸಡಿಲಗೊಳಿಸಿಲ್ಲ. ಪಾಸ್ ಹೊಂದಿದವರಿಗೆ ಮಾತ್ರವೇ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಹೋಗುವವರಿಗೆ ಮಂಗಳೂರು ಉಪ ವಿಭಾಗಾಧಿಕಾರಿ ಇ– ಪಾಸ್ಗಳನ್ನು ವಿತರಿಸಿದ್ದರು.
ಇ– ಪಾಸ್ಗಳ ಅವಧಿ ಆಗಸ್ಟ್ 11ರ ರಾತ್ರಿಗೆ ಅಂತ್ಯಗೊಳ್ಳಲಿದೆ. ಅಂತಹ ಎಲ್ಲ ಪಾಸ್ಗಳ ಅವಧಿಯನ್ನು ಸೆ.8ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶನಿವಾರ ಆದೇಶ ಹೊರಡಿಸಿದ್ದಾರೆ.