‘ಕಳೆದ ವರ್ಷ ದೇಶದಲ್ಲಿ ಕೋವಿಡ್ ಹರಡಲು ತಬ್ಲಿಘಿಗಳು ಕಾರಣ ಎಂದು ಆಕಾಶ–ಭೂಮಿ ಒಂದಾಗುವಂತೆ ಕೆಲವು ಮಾಧ್ಯಮಗಳು ಮುಸ್ಲಿಮರನ್ನು ಟೀಕಿಸಿದ್ದರು. ಇದರಿಂದ ಬೇಸತ್ತು ಈ ಸಮುದಾಯ ರಂಜಾನ್ ಉಪವಾಸದ ಅವಧಿಯಲ್ಲಿ ಬಟ್ಟೆ ಖರೀದಿ ಮಾಡುವುದನ್ನೇ ನಿಲ್ಲಿಸಿದ ಕಾರಣ ದೇಶಕ್ಕೆ ₹ 1,000 ಕೋಟಿ ಜಿಎಸ್ಟಿ ನಷ್ಟ ಆಗಿದೆ. ಕೋವಿಡ್ನಿಂದ ನಮ್ಮಂತಹ ಮಧ್ಯಮ ವರ್ಗದ ಜವಳಿ ವ್ಯಾಪಾರಿಗಳ ಸ್ಥಿತಿ ದೇವರೇ ಬಲ್ಲ. ಉದ್ಯೋಗ ಕಡಿತದಿಂದ ಸಾವಿರಾರು ಮಂದಿ ಬೀದಿಗೆ ಬಿದ್ದಿದ್ದಾರೆ. ನನ್ನಲ್ಲಿ ಕೆಲಸಕ್ಕಿದ್ದ 18 ಜನರಲ್ಲಿ ಐದು ಮಂದಿಯನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಕಡಿಮೆ ಶಿಕ್ಷಣ ಓದಿದವರಿಗೆ ನಾವು ಕೆಲಸ ಕೊಟ್ಟಿದ್ದೇವೆ. ಇವರಿಗೆ ಸರ್ಕಾರಿ ಕೆಲಸ ಕೊಡಲು ಸಾಧ್ಯವೇ? ನನ್ನಂತಹ ಜವಳಿ ವ್ಯಾಪಾರಿಗಳು ಬ್ಯಾಂಕ್ ಸಾಲ ಕಟ್ಟಲಾಗದೆ, ಮನೆ ಖರ್ಚು ನಿಭಾಯಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ವಿಡಿಯೊದಲ್ಲಿ ಅವರು ಹೇಳಿದ್ದಾರೆ.