ಮಂಗಳೂರು: ನಗರದ ಸಹ್ಯಾದ್ರಿ ಕಾಲೇಜಿನ ರಸ್ತೆಯಲ್ಲಿ ಸಿಕ್ಕ ಪರ್ಸ್ನಲ್ಲಿದ್ದ ₹1 ಲಕ್ಷ ಮೌಲ್ಯದ ಚಿನ್ನವನ್ನು ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ನಗರದ ಯುವಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಭಾಕರ್ ಪ್ರಭು ಅವರು ತಮ್ಮ ಸಂಬಂಧಿ ಶಾಸಕ ವೇದವ್ಯಾಸ ಕಾಮತ್ ಅವರ ಬಳಿ ಪರ್ಸ್ ಸಿಕ್ಕಿರುವ ಬಗ್ಗೆ ಹೇಳಿದ್ದರು. ವೇದವ್ಯಾಸ ಕಾಮತ್ ಸಲಹೆಯಂತೆ ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕ ರವೀಂದ್ರ ನಿಕ್ಕಂ ಅವರು, ತಮ್ಮ ಆಪ್ತ ವಲಯದಲ್ಲಿ ಪ್ರಸ್ತಾಪಿಸಿದ್ದರು. ಅದು ಅಡ್ಯಾರ್ ಬಳಿಯ ಕೃಷ್ಣ ಆಚಾರ್ ಅವರಿಗೆ ಸೇರಿದ್ದು ಎಂಬುದು ಪತ್ತೆಯಾಯಿತು.
ನಗರದ ಜೋಡು ಮಠ ರಸ್ತೆಯಲ್ಲಿರುವ ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಬುಧವಾರ ಟ್ರಸ್ಟ್ ಪ್ರಮುಖರಾದ ಹನುಮಂತ ಕಾಮತ್ ಅವರು, ಪ್ರಭಾಕರ್ ಪ್ರಭು, ರವೀಂದ್ರ ನಿಕ್ಕಂ ಅವರ ಉಪಸ್ಥಿತಿಯಲ್ಲಿ ಕೃಷ್ಣ ಆಚಾರ್ ಅವರಿಗೆ ಬಂಗಾರವನ್ನು ಹಸ್ತಾಂತರಿಸಿದರು.
ಕೃಷ್ಣ ಆಚಾರ್ ಸಾಂಪ್ರದಾಯಿಕ ಚಿನ್ನದ ಕೆಲಸಗಾರರಾಗಿದ್ದು, ಬಂಗಾರದ ಆಭರಣ ಮಾಡಲು ಚಿನ್ನದ ಗಟ್ಟಿಯನ್ನು ಖರೀದಿಸಿ ದಾರಿಯಲ್ಲಿ ಬರುತ್ತಿದ್ದಾಗ ಕಳೆದುಕೊಂಡಿದ್ದರು. ಚಿನ್ನದ ಗಟ್ಟಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಕೃಷ್ಣ ಆಚಾರ್, ಪ್ರಭಾಕರ್ ಪ್ರಭು ಅವರ ಪ್ರಾಮಾಣಿಕತೆ ಶ್ಲಾಘನೀಯ ಎಂದು ಹೇಳಿದ್ದಾರೆ.