ಪುತ್ತೂರು: ತಾಲ್ಲೂಕಿನ ಪಾಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಭಟ್ ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. 38 ವರ್ಷದ ಅವರು ಕಲಾ ವಿಭಾಗದಲ್ಲಿ 421 ಅಂಕ ಗಳಿಸಿದ್ದಾರೆ.
23 ವರ್ಷಗಳ ಹಿಂದೆ ಎಂಟನೇ ತರಗತಿ ಉತ್ತೀರ್ಣರಾದ ಬಳಿಕ ತಂದೆಯ ವಿಯೋಗ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಭಾರತಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು.
ಕಾಸರಗೋಡಿನ ಬದಿಯಡ್ಕ
ಚಾಂಗುಳಿ ವೆಂಕಟ್ರಮಣ ಭಟ್ ಅವರನ್ನು ವಿವಾಹವಾಗಿ ಪಾಣಾಜೆಯಲ್ಲಿ ವಾಸವಾಗಿರುವ ಅವರು, ಎರಡು ವರ್ಷಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದರು.
2021-22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಪುತ್ತೂರಿನ ನೆಲ್ಲಿಕಟ್ಟೆಯ ಕೋಟ ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಖಾಸಗಿಯಾಗಿ ಬರೆದು ಶೇ 54 ಅಂಕ ಪಡೆದಿದ್ದರು. ಪುತ್ತೂರು ತಾಲ್ಲೂಕಿನ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪತಿ ವೆಂಕಟ್ರಮಣ ಭಟ್, ಪುತ್ರಿಯರಾದ ಅದಿತಿ (8ನೇ ತರಗತಿ) ಮತ್ತು ಅನಘಾ (6ನೇ ತರಗತಿ) ಅವರೊಂದಿಗೆ ಜೀವನ ನಡೆಸುತ್ತಿರುವ ಅವರು ಪದವಿ ಶಿಕ್ಷಣ ಪಡೆಯುವ ಕನಸು ಹೊಂದಿದ್ದಾರೆ.