ಮಂಗಳೂರು: ನಗರದ ಟೋಕಿಯೊ ಮಾರ್ಕೆಟ್ನ ಬಟ್ಟೆ ಅಂಗಡಿಯೊಂದರಲ್ಲಿ ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಸುಲಿಗೆ ಮಾಡಲು ಯತ್ನಿಸಿದ ಒಬ್ಬನನ್ನು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಬಟ್ಟೆಯಂಗಡಿ ತೆರೆಯಲು ಅವಕಾಶ ಇಲ್ಲ ಎಂದು ಹೇಳಿದ ಮೂವರು, ತಾವು ಪಾಲಿಕೆ ಅಧಿಕಾರಿಗಳೆಂದು ಹೇಳಿ ಕೊಂಡು ವಿಡಿಯೊ ಹಾಗೂ ಫೋಟೊ ತೆಗೆಯಲು ಯತ್ನಿಸಿದ್ದರು. ಅದನ್ನು ಮಾಲೀಕ ವಿರೋಧಿಸಿದ್ದು, ಪ್ರಕರಣ ದಾಖಲಿಸುವುದನ್ನು ತಪ್ಪಿಸ ಬೇಕಾದರೆ ₹50ಸಾವಿರ ನೀಡುವಂತೆ ಒತ್ತಾಯಿಸಿದ್ದರು. ಬಳಿಕ ₹10ಸಾವಿರ ನೀಡುವಂತೆ ಹಾಗೂ ಇಲ್ಲವಾದಲ್ಲಿ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿ, ಪೊಲೀ ಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಲಾಗಿತ್ತು.
ಪ್ರಕರಣವನ್ನು ಪರಿಶೀಲಿಸಿದಾಗ ಆ ವ್ಯಕ್ತಿಗಳು ಪಾಲಿಕೆ ಅಧಿಕಾರಿಗಳಲ್ಲ ಎಂಬುದು ತಿಳಿದುಬಂದಿದೆ. ಅವರ ಮೇಲೆ ಸುಲಿಗೆ ಪ್ರಕರಣವನ್ನು ದಾಖಲಿಸಲಾಗಿದೆ. ಒಬ್ಬನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ದೂರುದಾರರು ಕೂಡಾ ಲಾಕ್ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದು, ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಚಿನ್ನಾಭರಣ ಕದ್ದಿದ್ದ ಆರೋಪಿ ಬಂಧನ
ಮಂಗಳೂರು: ವಾಹನದಲ್ಲಿ ಬರುತ್ತಿದ್ದ ಮಹಿಳೆಯ ಚಿನ್ನಾಭರಣವನ್ನು ಕಳವು ಮಾಡಿದ್ದ ಆರೋಪಿಯನ್ನು ಕದ್ರಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಭದ್ರಾವತಿಯ ನಿವಾಸಿ ಸದ್ಯಕ್ಕೆ ದಾಂಡೇಲಿಯಲ್ಲಿ ವಾಸಿಸುತ್ತಿರುವ ಪಿ. ಜ್ಞಾನರತ್ನಂ ಕೃಪಾರಾವ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ನವಭಾರತ್ ಸರ್ಕಲ್ ಬಳಿಯ ನಿವಾಸಿ ವಸಂತಾ ಅವರು ಮಾರ್ಚ್್ 10 ರಂದು ಭದ್ರಾವತಿಯಿಂದ ಮಂಗಳೂರಿಗೆ ವಾಹನವೊಂದರಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಚಿನ್ನಾಭರಣದ ಬ್ಯಾಗ್ ಕಳವಾಗಿತ್ತು. ಈ ಬಗ್ಗೆ ವಸಂತಾ ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬ್ಯಾಗ್ನಲ್ಲಿ ₹2.50 ಲಕ್ಷ ಮೌಲ್ಯದ ಚಿನ್ನಾಭರಣವಿತ್ತು.
ಈ ಬಗ್ಗೆ ತನಿಖೆ ನಡೆಸಿದ ಕದ್ರಿ ಪೊಲೀಸರು, ಆರೋಪಿ ಜ್ಞಾನರತ್ನಂ ಕೃಪಾರಾವ್ನನ್ನು ಬಂಧಿಸಿದ್ದಾರೆ. ಈತ ಹುಬ್ಬಳ್ಳಿ, ದಾಂಡೇಲಿ, ಭದ್ರಾವತಿಯ ಮಣಪ್ಪುರಂ, ಮುತ್ತೂಟ್, ಐಐಎಫ್ಸಿ ಫೈನಾನ್ಸ್ಗಳಲ್ಲಿ ಅಡವಿಟ್ಟಿದ್ದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.