ಮಂಗಳೂರು: ನಗರದಲ್ಲಿ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಎರಡು ದಿನಗಳಿಂದ ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಸೆಖೆಯಿಂದ ಬಳಲುತ್ತಿದ್ದ ಜನರು, ಸಂಜೆ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟರು.
ಇನ್ನೂ ನಾಲ್ಕು ದಿನ ಕರಾವಳಿಯಾದ್ಯಂತ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಮಧ್ಯಾಹ್ನದವರೆಗೆ ಬಿಸಿಲಿನ ಆರ್ಭಟ ಜೋರಾಗಿತ್ತು. ಮಧ್ಯಾಹ್ನ ನಂತರ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಒಂದೇ ಸಮನೆ ಮಳೆ ಸುರಿಯಿತು. ನಗರದಲ್ಲಿ ತಗ್ಗುಪ್ರದೇಶದ ರಸ್ತೆಗಳಲ್ಲಿ ಮಳೆನೀರು ಹರಿದಿದ್ದರಿಂದ ವಾಹನ ಸವಾರರು ಸಮಸ್ಯೆ ಎದುರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಸುಳ್ಯ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.
ವಾಡಿಕೆಗಿಂತ ಕಡಿಮೆ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪ್ರವೇಶದ ಬಳಿಕ ವಾಡಿಕೆಯಷ್ಟು ಮಳೆಯಾಗಿಲ್ಲ. ಜೂನ್14ರಿಂದ 20ರ ನಡುವೆ ಸರಾಸರಿ 539.5 ಮಿ.ಮೀ. ಮಳೆಯಾಗುವುದು ವಾಡಿಕೆ. ಆದರೆ, ಈ ಬಾರಿ ವಾಡಿಕೆಗಿಂತ ಶೇ 59ರಷ್ಟು ಕಡಿಮೆ (221.8 ಮಿ.ಮೀ) ಮಳೆಯಾಗಿದೆ.
ಪ್ರತಿವರ್ಷ ಜನವರಿಯಿಂದ ಜೂನ್ 20ರವರೆಗೆ ಜಿಲ್ಲೆಯಲ್ಲಿ ಸರಾಸರಿ 782 ಮಿ.ಮೀ ಮಳೆಯಾಗುತ್ತದೆ. ಆದರೆ ಈ ಬಾರಿ 717 ಮಿ.ಮೀ ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ 8ರಷ್ಟು ಕಡಿಮೆ. ಮೇ ತಿಂಗಳಿನಲ್ಲಿ ಆ ತಿಂಗಳ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು.
ಉಡುಪಿ ಜಿಲ್ಲೆಯಾದ್ಯಂತ ಸಂಜೆ ವೇಳೆ ಉತ್ತಮ ಮಳೆಯಾಗಿದೆ. ಜಿಲ್ಲೆಯ ಕೆಲವೆಡೆ ತಗ್ಗುಪ್ರದೇಶಗಳು ಜಲಾವೃತವಾಗಿದ್ದವು.